– ದೆಹಲಿಯ ಅಶೋಕ ಹೋಟೆಲಿನಲ್ಲಿ ಸಭೆ
ನವದೆಹಲಿ: ಲೋಕಸಮರದಲ್ಲಿ (Lok Sabha Election) ಬಿಜೆಪಿ (BJP) ವಿರುದ್ಧ ರಣಕಹಳೆ ಮೊಳಗಿಸುತ್ತಿರುವ INDIA ಒಕ್ಕೂಟದ ನಾಲ್ಕನೇ ಸಭೆ ದೆಹಲಿಯ ಅಶೋಕ ಹೋಟೆಲಿನಲ್ಲಿ (Ashok Hotel) ನಡೆಯಲಿದೆ. ಈ ಸಭೆಯಲ್ಲಿ ಪ್ರತಿ ರಾಜ್ಯದಲ್ಲಿ ಸೀಟ್ ಹೊಂದಾಣಿಕೆ ಮತ್ತು ಪ್ರಧಾನಿ ಅಭ್ಯರ್ಥಿ (Prime Minister Candidate) ಕುರಿತಾಗಿ ಚರ್ಚೆ ನಡೆಯಲಿದೆ.
ನಮ್ಮ ಒಳಗೆ ಸ್ಪರ್ಧೆ ನಡೆದರೆ ಬಿಜೆಪಿಗೆ (BJP) ಲಾಭ ಎಂಬುದನ್ನು ಅರಿತ ವಿಪಕ್ಷಗಳು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತಗಳ ಕ್ರೋಢಿಕರಣಕ್ಕೆ ತಂತ್ರ ರೂಪಿಸಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟ ನಾಯಕರು ಒಟ್ಟಾಗಿ ಪ್ರಚಾರ ನಡೆಸುವ ಸಾಧ್ಯತೆಯಿದೆ. ಇದರ ಜೊತೆಗೆ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಸಮಾಲೋಚನೆ ನಡೆಯಲಿದೆ. ಇದನ್ನೂ ಓದಿ:ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಸಂಸದರ ಅಮಾನತು – ಯಾವ್ಯಾವ ಅವಧಿಯಲ್ಲಿ ಎಷ್ಟು ಮಂದಿ ಸಸ್ಪೆಂಡ್?
ಪ್ರಧಾನಿ ಅಭ್ಯರ್ಥಿ ರೇಸ್ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದ್ದರೆ ಟಿಎಂಸಿಯಿಂದ ಮಮತಾ, ಜೆಡಿಯುನಿಂದ ನಿತೀಶ್ ಕುಮಾರ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ತೀವ್ರ ಪೈಪೊಟಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಈಗ ಗೊಂದಲದಲ್ಲಿದ್ದಾರೆ.
ಈಗಾಗಲೇ ಪ್ರಧಾನಿ ಅಭ್ಯರ್ಥಿ ಘೋಷಣೆ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಸುಳಿವು ನೀಡಿದ್ದಾರೆ. ಹೀಗಾಗಿ ಪ್ರಧಾನಿ ಅಭ್ಯರ್ಥಿ ಘೊಷಣೆಯಿಂದಾಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ.
ಈ ವಿಷಯದ ಜೊತೆಗೆ ಲೋಕಸಭೆ ಮತ್ತು ರಾಜ್ಯಸಭೆಯಿಂದ 94 ಸಂಸದರನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ನಿರ್ಧಾರ ತಗೆದುಕೊಳ್ಳುವ ಸಾಧ್ಯತೆಯಿದೆ.