ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯೂಸೂಫ್ ಖಾನ್ ನಾಪತ್ತೆ ಆಗಿದ್ದಾರೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂಳೆಬೈಲಿನಲ್ಲಿ ಇರುವ ತಮ್ಮ ಮನೆಯಿಂದ ಗುರುವಾರ ಮುಂಜಾನೆ ಕಾರಿನಲ್ಲಿ ಹೋದವರು ಮರಳಿ ಬಂದಿಲ್ಲ ಎಂದು ಅವರ ಮಗ ಮಹಮ್ಮದ್ ಸುಲೇಮಾನ್ ದೂರಿನಲ್ಲಿ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಹಾಗೂ ಟಿಂಬರ್ ವ್ಯವಹಾರ ಮಾಡುತ್ತಿದ್ದ ಯೂಸೂಫ್ ಖಾನ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 397 ಮತಗಳನ್ನು ಪಡೆದಿದ್ದರು. ಅಲ್ಲದೆ ಚುನಾವಣೆಗೆ ಒಂದು ವಾರ ಇರುವಾಗ ಎದೆ ನೋವು ಎಂದು ಆಸ್ಪತ್ರೆಗೆ ಸೇರಿದ್ದರು.
ಇದೀಗ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತುಂಗಾ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಅಭ್ಯರ್ಥಿ ನಾಪತ್ತೆ ಪ್ರಕರಣ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಯಾನಂದ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.