ತುಮಕೂರು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕುಣಿಗಲ್ ತಹಶೀಲ್ದಾರ್ ಮತ್ತು ಇ.ಒ ಪರಸ್ಪರ ಕಿತ್ತಾಟ ಮಾಡಿಕೊಂಡಿದ್ದಾರೆ.
ಕುಣಿಗಲ್ ಪಟ್ಟಣದ ಕಂದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಯುತಿತ್ತು. ಆ ವೇಳೆ ಕುಣಿಗಲ್ ತಹಶಿಲ್ದಾರ್ ನಾಗರಾಜು ಹಾಗೂ ಇ.ಒ. ನಾರಾಯಣಸ್ವಾಮಿ ನಡುವೆ ಕಿತ್ತಾಟ ನಡೆದಿದೆ.
ಸಭೆ ನಡೆಯುತ್ತಿದ್ದರೂ ಈ ಸಭೆಗೂ ನನಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಇ.ಒ.ನಾರಾಯಣಸ್ವಾಮಿ ಕಡತಗಳಿಗೆ ಸಹಿ ಹಾಕುವುದರಲ್ಲಿ ಮಗ್ನರಾಗಿದ್ದರು. ಈ ವರ್ತನೆಗೆ ಸಿಡಿಮಿಡಿಗೊಂಡ ತಹಶೀಲ್ದಾರ್ ನಾಗರಾಜು, ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಎಲ್ಲ ಜವಾಬ್ದಾರಿ ಇ.ಒ.ಸಾಹೇಬ್ರು ವಹಿಸಿಕೊಳ್ಳಬೇಕು ಎಂದಿದ್ದಾರೆ. ಅದಕ್ಕೆ ಇ.ಒ ನಾರಾಯಣಸ್ವಾಮಿ ನಾನೇಕೆ ಮಾಡಲಿ, ನೀವು ಸಮಿತಿ ಅಧ್ಯಕ್ಷರು ನೀವೇ ಜವಾಬ್ದಾರಿ ನಿರ್ವಹಿಸಿ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಪರಸ್ಪರ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಗೊಂದಲ ವಾತಾವರಣ ಉಂಟಾಗಿದೆ. ಸಿಬ್ಬಂದಿ ಇಬ್ಬರ ಕಿತ್ತಾಟ ಕಂಡು ತಬ್ಬಿಬ್ಬಾಗಿದ್ದಾರೆ. ಬಳಿಕ ಮಧ್ಯಪ್ರವೇಶಿಸಿದ ಸಂಘಟನೆಗಳ ಮುಖಂಡರು ಇಬ್ಬರೂ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಸಭೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.