ಗುವಾಹಟಿ: ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ 2ನೇ ಟಿ20 ಪಂದ್ಯ ಗುವಾಹಟಿಯಲ್ಲಿ ಇಂದು ನಡೆಯಲಿದ್ದು, ಈಗಾಗಲೇ ಪಂದ್ಯದ ಟಿಕೆಟ್ ಸೋಲ್ಡ್ ಔಟ್ (Tickets Sold out) ಆಗಿದೆ. ಆದರೆ ಇತ್ತ ಪಂದ್ಯಕ್ಕೆ ಮಳೆ ಅಡಚಣೆಯಾಗುವ ಸಾಧ್ಯತೆ ಇದೆ.
ಕೇರಳದಲ್ಲಿ ನಡೆದ ಮೊದಲ ಪಂದ್ಯ ಗೆದ್ದಿದ್ದ ಭಾರತ ಇದೀಗ ಎರಡನೇ ಪಂದ್ಯ ಗೆದ್ದು ಸರಣಿ ಗೆಲ್ಲುವ ತವಕದಲ್ಲಿದೆ. ಇತ್ತ ಮೊದಲ ಟಿ20 ಪಂದ್ಯದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಆಫ್ರಿಕಾ ಪುಟಿದೇಳುವ ಹುಮ್ಮಸ್ಸಿನಲ್ಲಿದೆ. ಇಂದು ಎರಡನೇ ಟಿ20 ಪಂದ್ಯಕ್ಕೆ ಅಸ್ಸಾಂನ ಬರಾಸ್ಪುರ ಕ್ರಿಕೆಟ್ ಸ್ಟೇಡಿಯಂ (Barsapara Cricket Stadium) ಸಜ್ಜಾಗಿದೆ. ಪಂದ್ಯಕ್ಕೆ ವರುಣನ (Rain) ಕಾಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಹಾಗಾಗಿ ಇಂದು ಕೂಡ ಮಳೆ ಸುರಿಯುವ ಸೂಚನೆ ಇದೆ. ಇದನ್ನೂ ಓದಿ: ಲೆಜೆಂಡ್ಸ್ಗಳ ಲೆಜೆಂಡರಿ ಆಟ – ಲಂಕನ್ನರಿಗೆ ಸೋಲುಣಿಸಿ ಚಾಂಪಿಯನ್ ಆದ ಭಾರತ
ಹವಾಮಾನ ವೈಪರೀತ್ಯದಿಂದಾಗಿ ಕಳೆದೆರಡು ದಿನಗಳಿಂದ ಅಸ್ಸಾಂನಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ಇಂದು ಕೂಡ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ವೈಪರಿತ್ಯ ಎದುರಿಸಲು ತಮ್ಮ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ Assam Cricket Association (ACA) ಭರವಸೆ ನೀಡಿದ್ದು, ಮಳೆ ನಿಂತ ಕೂಡಲೇ ಆಟಕ್ಕೆ ಮೈದಾನ ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ಬುಮ್ರಾ – ಮೆಡಿಕಲ್ ಟೀಂನಿಂದ ಶುಭ ಸುದ್ದಿ
ಮಳೆಯ ನಡುವೆಯೇ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ. 39,000 ಪ್ರೇಕ್ಷಕರು ವೀಕ್ಷಿಸಬಹುದಾದ ಸಾಮರ್ಥ್ಯದ ಸ್ಟೇಡಿಯಂ ಭರ್ತಿಯಾಗಿದ್ದು, ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ವರುಣ ಕೃಪೆ ತೋರಿದರೆ ಮಾತ್ರ ಪಂದ್ಯ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ 2ನೇ ಪಂದ್ಯವನ್ನೂ ಗೆದ್ದು ಅಂತಿಮ ಪಂದ್ಯಕ್ಕೂ ಮುನ್ನವೇ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿ ಟೀಂ ಇಂಡಿಯಾ ಇದೆ. ತಂಡಕ್ಕೆ ಬುಮ್ರಾ ಬದಲು ಸಿರಾಜ್ ಆಗಮನವಾಗಿದೆ. ಅತ್ತ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟ ಆಫ್ರಿಕಾ ತಂಡಕ್ಕೆ ಬ್ಯಾಟ್ಸ್ಮ್ಯಾನ್ಗಳು ಕೈಹಿಡಿಯಬೇಕಾಗಿದೆ. ಎರಡು ತಂಡಗಳು ಕೂಡ ಬಲಿಷ್ಠವಾಗಿದ್ದು, ಮಳೆ ಬಿಟ್ಟರೆ, ರೋಚಕ ಹಣಾಹಣಿಗೆ ಗುವಾಹಟಿ ಸಾಕ್ಷಿಯಾಗಲಿದೆ.