ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ (Air Pollution) ಹೆಚ್ಚುತ್ತಿರುವ ಹಿನ್ನೆಲೆ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮಾಲಿನ್ಯ ನಿಯಂತ್ರಣದವರೆಗೂ ಪ್ರಾಥಮಿಕ ಶಾಲೆಗಳನ್ನು ತೆರೆಯುವುದಿಲ್ಲ ಎಂದು ತಿಳಿಸಿದರು.
5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹೊರಾಂಗಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು. ವೃದ್ಧರ ಆರೋಗ್ಯದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸುತ್ತಿದೆ. ದೆಹಲಿಯಲ್ಲಿ ಸಮ, ಬೆಸ ವ್ಯವಸ್ಥೆ ಮತ್ತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಶೀಘ್ರದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಎಂ ಕೇಜ್ರಿವಾಲ್ ಜೊತೆಗೆ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಕೂಡಾ ಉಪಸ್ಥಿತರಿದ್ದರು. ಮಾಲಿನ್ಯ ಹೆಚ್ಚುತ್ತಿರುವ ಹೊತ್ತಲ್ಲಿ ದೆಹಲಿ, ಪಂಜಾಬ್ ಸರ್ಕಾರಗಳ ಮೇಲೆ ಬರುತ್ತಿರುವ ಆಕ್ಷೇಪಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಮಾಡಿದರು.
ಅರವಿಂದ್ ಕೇಜ್ರಿವಾಲ್ ಮಾತನಾಡಿ, ವಾಯುಮಾಲಿನ್ಯ ಕೇವಲ ದೆಹಲಿ, ಪಂಜಾಬ್ಗೆ ಸೀಮಿತವಾಗಿಲ್ಲ. ಉತ್ತರ ಭಾರತದ ಸಮಸ್ಯೆಯಾಗಿದೆ. ಹರಿಯಾಣ, ರಾಜಸ್ಥಾನದಲ್ಲೂ ಮಾಲಿನ್ಯ ಹೆಚ್ಚುತ್ತಿದೆ. ಕೇವಲ ಪಂಜಾಬ್, ದೆಹಲಿ ಸರ್ಕಾರ ಮಾತ್ರ ಇದಕ್ಕೆ ಹೊಣೆಯಲ್ಲ. ಇದು ರಾಜಕೀಯ ಆರೋಪ ಮಾಡುವ ಸಮಯವಲ್ಲ. ರೈತರು ಹುಲ್ಲಿಗೆ ಬೆಂಕಿ ಇಡುವುದನ್ನು ಕಡಿಮೆ ಮಾಡಿದ್ದಾರೆ. ಇದು ಮುಂದಿನ ವರ್ಷ ಇನ್ನೂ ಕಡಿಮೆಯಾಗಲಿದೆ. 6 ತಿಂಗಳ ಹಿಂದೆ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದ ಆಪ್ ಸರ್ಕಾರ ಇದಕ್ಕೆ ಹೊಣೆಯಲ್ಲ ಎಂದರು. ಇದನ್ನೂ ಓದಿ: ಗುಜರಾತ್ ಚುನಾವಣೆ – ಇಂದು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ
ಪೂರ್ಣ ಉತ್ತರ ಭಾರತದಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಮಾಲಿನ್ಯ ತಡೆಯಲು ಕ್ರಮ ತೆಗೆದುಕೊಳ್ಳಬೇಕು. ಕೇಜ್ರಿವಾಲ್ಗೆ ಬೈಯುವುದರಿಂದ ಮಾಲಿನ್ಯ ಕಡಿಮೆಯಾಗುತ್ತಾ? ಕಡಿಮೆಯಾಗುವುದಾದರೆ ಬೈಯಲಿ. ಇಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಪಂಜಾಬ್ನಲ್ಲಿ ಈ ಬಾರಿ ಭತ್ತದ ಬಂಪರ್ ಬೆಳೆ ಬಂದಿದೆ. ಇದರಿಂದ ಒಣ ಹುಲ್ಲು ಸುಡುವ ಕೆಲಸವೂ ಹೆಚ್ಚಿದೆ. ರೈತರಿಗೆ ಇದನ್ನು ಕಟಾವು ಮಾಡುವ ದೃಷ್ಟಿಯಿಂದ ನೆರವು ನೀಡಲಾಗುತ್ತಿದೆ. ಮುಂದಿನ ವರ್ಷ ಮಾಲಿನ್ಯ ನಿಯಂತ್ರಣಕ್ಕೆ ತರುವ ಭರವಸೆಯನ್ನು ಸಿಎಂ ಭಗವಂತ್ ಮಾನ್ ನೀಡಿದರು. ಇದನ್ನೂ ಓದಿ: ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳು ಕತಾರ್ನಲ್ಲಿ ಬಂಧನ – ಎಂಇಎ