ರಾಮನಗರ: ರಾಜ್ಯದ ರಾಜಧಾನಿ ಮತ್ತು ಸಾಂಸ್ಕೃತಿಕ ನಗರಿಯ ನಡುವಿನ ಸಂಚಾರದ ಸಮಯ ತಗ್ಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru – Mysuru Expressway) 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
4 ತಾಸುಗಳ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸಮಯದಲ್ಲಿ 75 ನಿಮಿಷಗಳಿಗೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡ ಎಕ್ಸ್ಪ್ರೆಸ್ ವೇಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇದನ್ನೂ ಓದಿ: ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು
2022ರ ಸೆಪ್ಟೆಂಬರ್ ಮೊದಲ ವಾರದಿಂದ ಹೆದ್ದಾರಿಯಲ್ಲಿ ಸಂಚಾರ ಆರಂಭಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 849 ರಸ್ತೆ ಅಪಘಾತಗಳು ಸಂಭವಿಸಿ 155 ಮಂದಿ ಸಾವಿಗೀಡಾಗಿದ್ದು, 213 ಮಂದಿ ತೀವ್ರ ಗಾಯಗೊಂಡಿದ್ದಾರೆ. ರಾಮನಗರ (Ramnagar) ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೆ 279 ಅಪಘಾತಗಳು ಸಂಭವಿಸಿದ್ದು, 100 ಮಂದಿ ಸಾವಿಗೀಡಾಗಿದ್ದರೆ.
ಅಪಘಾತಕ್ಕೆ ಕಾರಣ ಏನು?
ರಾಮನಗರ ಹಾಗೂ ಚನ್ನಪಟ್ಟಣ (Channapatana) ನಡುವೆ 55.50 ಕಿ.ಮೀನಷ್ಟಿರುವ ಬೈಪಾಸ್ ರಸ್ತೆ ಅಪಘಾತಗಳ ಹಾಟ್ಸ್ಪಾಟ್ ಆಗಿದೆ. ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಹೆಚ್ಚಿನ ಪ್ರಕರಣ ಈ ಬೈಪಾಸ್ ರಸ್ತೆಯಲ್ಲೇ ಸಂಭವಿಸಿದೆ. ಎಕ್ಸ್ಪ್ರೆಸ್ ವೇನಲ್ಲಿ ವೇಗಮಿತಿ ಇಲ್ಲದಿರುವುದು, ವಾಹನಗಳು ಲೈನ್ ನಿಯಮವನ್ನು ಪಾಲಿಸದೇ ಇರುವುದು, ಪದೇ ಪದೆ ವಾಹನಗಳು ಲೈನ್ಕ್ರಾಸ್ ಮಾಡುವುದು ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೇ ಬೈಪಾಸ್ ರಸ್ತೆಗಳಲ್ಲಿ ಪ್ರಯಾಣಿಕರಿಗೆ ಸೂಚನಾ ಫಲಕ ಇಲ್ಲದಿರುವುದು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ, ತುರ್ತು ಚಿಕಿತ್ಸಾ ವ್ಯವಸ್ಥೆ ಲಭ್ಯವಿಲ್ಲದಿರೋದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಪೊಲೀಸ್ ಇಲಾಖೆ ಕೂಡಾ ಹಲವು ಮುಂಜಾಗ್ರತಾ ಕ್ರಮವಹಿಸಿದೆ. ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಹೈವೆ ಪರಿಶೀಲನೆ ನಡೆಸಿ ಹಲವು ಬ್ಲಾಕ್ ಸ್ಪಾಟ್ಗಳನ್ನ ಗುರುತು ಮಾಡಿದೆ. ಅಲ್ಲದೇ ಕೆಲವೆಡೆ ಅವೈಜ್ಞಾನಿಕ ಕಾಮಗಾರಿ ಇರುವುದನ್ನ ಸರಿಪಡಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದೆ. ಅಲ್ಲದೇ ಸೂಚನಾ ಫಲಕ, ಸ್ಪೀಡ್ ಲಿಮಿಟ್ ಸೆನ್ಸರ್ಗಳ ಅಳವಡಿಕೆ ಸೇರಿ ಹಲವು ನ್ಯೂನತೆ ಸರಿಪಡಿಸುವಂತೆ ತಿಳಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ರೋಡ್ ಸೇಫ್ಟಿ ಬಗ್ಗೆಯೂ ಅರಿವು ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬಂದಿದ್ದ ಗ್ರಾಮ ಪಂಚಾಯ್ತಿ ಸದಸ್ಯೆಯರ ಕಿಡ್ನಾಪ್!