ನವದೆಹಲಿ: ವಿದೇಶಗಳಿಂದ ಆಮದಾಗುವ ಅಡಿಕೆ ಮೇಲಿನ ಆಮದು ಸುಂಕ ಹೆಚ್ಚಿಸಬೇಕು. ಅಡಿಕೆ ಆಧರಿತ ಉತ್ಪನ್ನಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಇಳಿಕೆ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಕೇಂದ್ರ ಸಚಿವರಕ್ಕೆ ಮನವಿ ಮಾಡಿದೆ.
ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜವಳಿ ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಶೋಭಾ ಕರಂದ್ಲಾಜೆ ಅವರನ್ನು ನಿಯೋಗ ಭೇಟಿ ಮಾಡಿದೆ. ಇದನ್ನೂ ಓದಿ: ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್
ಭೇಟಿ ವೇಳೆ ಪ್ರತಿ ಕೆಜಿ ಬಿಳಿ ಅಡಿಕೆಗೆ 360 ರೂಪಾಯಿ, ಕೆಂಪು ಅಡಿಕೆಗೆ 408 ರೂಪಾಯಿಗೆ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು. ಎಂಟು ವರ್ಷದ ಹಿಂದೆ ಅಡಿಕೆಗೆ 251 ರೂಪಾಯಿ ಬೆಲೆ ನಿಗದಿಯಾಗಿತ್ತು. ಈಗ ಬೆಳೆ ಬೆಳೆಯಲು ಹೆಚ್ಚಿನ ಹಣ ವ್ಯಯವಾಗುತ್ತಿದ್ದು, ಬೆಲೆ ಪರಿಷ್ಕರಣೆಯಾಗಬೇಕು ಎಂದು ಮನವಿ ಮಾಡಿದರು.
ಅಲ್ಲದೇ ವಿದೇಶಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಅಡಿಕೆ ಭಾರತಕ್ಕೆ ಆಮದಾಗುತ್ತಿದೆ. ಇದರಿಂದ ಭಾರತದ ರೈತರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ಆಮದು ಸುಂಕ ಹೆಚ್ಚಿಸಿ ದೇಶದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇದರ ಜೊತೆಗೆ ಅಡಿಕೆ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು 28% ನಿಂದ ಕಡಿಮೆ ಮಾಡಬೇಕು ಎಂದು ಕೋರಿದರು. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್
ನಿಯೋಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಕ್ಯಾಂಪ್ಕೊ ಚೇರ್ಮನ್ ಕಿಶೋರ ಕುಮಾರ್ ಕೂಡಗಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್, ನಿರ್ದೇಶಕ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.