ಶಿವಮೊಗ್ಗ: ನೋಟು ನಿಷೇಧ ವರ್ಷಚಾರಣೆಯಂದೇ ಶಿವಮೊಗ್ಗ ಜಿಲ್ಲಾ ಕೇದ್ರ ಸಹಕಾರಿ(ಡಿಸಿಸಿ) ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಶಿವಮೊಗ್ಗದಲ್ಲಿರುವ ಡಿಸಿಸಿ ಬ್ಯಾಂಕ್ ಕಚೇರಿ, ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿಯ ಬೆಟ್ಟಮಕ್ಕಿ, ಕರಕುಚ್ಚಿಯಲ್ಲಿರುವ ನಿವಾಸಗಳ ಮೇಲೂ ದಾಳಿ ನಡೆದಿದೆ.
ಐಟಿ ದಾಳಿ ಮರೆಮಾಚಲು ನೆಟ್ವರ್ಕ್, ಸಾಫ್ಟ್ ವೇರ್ ಸಮಸ್ಯೆಯಿಂದ ವಹಿವಾಟು ಇಲ್ಲ ಎಂದು ಕಚೇರಿ ಹೊರಗೆ ಬೋರ್ಡ್ ಹಾಕಲಾಗಿದೆ. ನೋಟ್ ನಿಷೇಧವಾದ ಬಳಿಕ ಡಿಸಿಸಿ ಬ್ಯಾಂಕ್ ನಲ್ಲಿ ಅಪಾರ ಪ್ರಮಾಣದ ಹಣ ಜಮೆಯಾಗಿತ್ತು.
ಈ ಹಿಂದೆ ಮಂಜುನಾಥ ಗೌಡ ಮೇಲೆ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿ ನಡೆದಿತ್ತು. ಜತೆಗೆ ಅಪೆಕ್ಸ್ ಬ್ಯಾಂಕ್ ಅಕ್ರಮ ನೇಮಕಾತಿ, ನಕಲಿ ಚಿನ್ನ ಅಡವಿಟ್ಟು ಡಿಸಿಸಿ ಬ್ಯಾಂಕ್ ನಿಂದ ಅಕ್ರಮವಾಗಿ ಸಾಲ ಪಡೆದ 68 ಕೋಟಿ ರೂಪಾಯಿಯ ಹಗರಣದಲ್ಲಿಯೂ ಮಂಜುನಾಥ ಗೌಡ ಆರೋಪಿಯಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಪಕ್ಷದಿಂದ ಮಂಜುನಾಥ ಗೌಡ ತೀರ್ಥಹಳ್ಳಿಯಿಂದ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.