ಮಡಿಕೇರಿ: ಕುಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
5ನೇ ತರಗತಿಯ ದಿವ್ಯ(9), 2ನೇ ತರಗತಿಯ ಸೂರ್ಯ(6), ಲಕ್ಷ್ಮಿ (6), ಆಶಾ(7) ಕಾಣೆಯಾದ ಮಕ್ಕಳು. ಅಪ್ಪ-ಅಮ್ಮ ಕೆಲಸಕ್ಕೆ ಹೋದ ಬಳಿಕ ಶಾಲೆಗೆ ಹೋಗಬೇಕಿದ್ದ ಮಕ್ಕಳು ಕಾಣೆಯಾಗಿದ್ದಾರೆ. ಹಾಡಿ ಜನಾಂಗದ ರವಿ ಮತ್ತು ಜಯ ದಂಪತಿಯ ಮಕ್ಕಳಾದ ದಿವ್ಯ ಹಾಗೂ ಸೂರ್ಯ, ನಾಗೇಶ್ ಮತ್ತು ನಾಗು ಎಂಬವರ ಸಾಕು ಮಕ್ಕಳಾದ ಲಕ್ಷ್ಮಿ ಮತ್ತು ಆಶಾ ಕಾಣೆಯಾಗಿದ್ದಾರೆ.
ಮಕ್ಕಳು ಮನೆಗೆ ಬಾರದೇ ಸಂಬಂಧಿಕರ ಮನೆಯಲ್ಲಿರಬಹುದು ಎಂದು ಪೋಷಕರು ಭಾವಿಸಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ಮಕ್ಕಳು ಶಾಲೆಗೆ ಬರದೇ ಇದ್ದ ಕಾರಣ ಮುಖ್ಯೋಪಾಧ್ಯಯರು ಪೋಷಕರಿಗೆ ಕರೆ ಮಾಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯ ಮುಖ್ಯೋಪಾಧ್ಯಯರ ಸಲಹೆಯ ಮೇರೆಗೆ ಪೋಷಕರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಕ್ಕಳನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.