ಚಿಕ್ಕಬಳ್ಳಾಪುರ: ಸಿಸಿಬಿ ಪೊಲೀಸರ ಸೋಗಿನಲ್ಲಿ ಸರ್ಕಾರಿ ವಸತಿ ನಿಲಯಕ್ಕೆ ಬಂದ ಕಿಡಿಗೇಡಿಗಳು, ಹಾಸ್ಟೆಲ್ ನ ಆಡುಗೆ ಸಹಾಯಕನನ್ನ ಕಿಡ್ನಾಪ್ ಮಾಡಿ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ನಂದಿ ಗ್ರಾಮದ ಹೊರವಲಯದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜನವರಿ 31 ರ ಮುಂಜಾನೆ 5 ಗಂಟೆ ಸುಮಾರಿಗೆ ನುಗ್ಗಿರುವ 12 ಮಂದಿಯ ತಂಡ ಹಾಸ್ಟೆಲ್ ನ ಆಡುಗೆ ಸಹಾಯಕ ವೇಣುಗೋಪಾಲ ಸ್ವಾಮಿಗೆ ತಾವು ಸಿಸಿಬಿ ಪೊಲೀಸರು, ಕಳ್ಳತನ ಕೃತ್ಯದಲ್ಲಿ ನೀನು ಭಾಗಿಯಾಗಿದ್ದೀಯಾ ಎಂದು ಕರೆದುಕೊಂಡು ಹೋಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಪಸೀಪುರ ಅರಣ್ಯಪ್ರದೇಶಕ್ಕೆ ಕರೆದ್ಯೊಯ್ದ ಕಿಡಿಗೇಡಿಗಳು ವೇಣುಗೋಪಾಲಸ್ವಾಮಿ ಮೇಲೆ ಹಲ್ಲೆ ಮಾಡಿ, ನಿನ್ನ ಸ್ನೇಹಿತ ಹರೀಶ್ ಎಲ್ಲಿ ಎಂದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದಾರೆ.
ಏನಿದು ಘಟನೆ: ಮೂಲತಃ ಮಾಗಡಿ ತಾಲೂಕಿನ ವೇಣುಗೋಪಾಲಸ್ವಾಮಿ ಅದೇ ತಾಲೂಕಿನ ಸೀಗೆಕುಪ್ಪೆ ಗ್ರಾಮದ ಹರೀಶ್ ಎಂಬಾತ ಪರಿಚಯವಿದ್ದು ಇಬ್ಬರು ಸ್ನೇಹಿತರಾಗಿದ್ದರು. ಆದರೆ ಹರೀಶ್ ತಾವರೆಕೆರೆ ಮೂಲದ ಯುವತಿಯೊಂದಿಗೆ ಪರಾರಿಯಾಗಿದ್ದು, ಈ ಬಗ್ಗೆ ವೇಣುಗೋಪಾಲಸ್ವಾಮಿಗೆ ಹರೀಶ್ ಎಲ್ಲಿದ್ದಾನೋ ಗೊತ್ತಿರುತ್ತೆ ಎಂಬ ಹಿನ್ನೆಲೆಯಲ್ಲಿ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಇದಕ್ಕೆ ಸಿಸಿಬಿ ಪೊಲೀಸರ ಹೆಸರಿನಲ್ಲಿ ಹಾಸ್ಟೆಲ್ಗೆ ನುಗ್ಗಿ ವೇಣುಗೋಪಾಲಸ್ವಾಮಿಯನ್ನ ಅಪಹರಿಸಿದ್ದಾರೆ.
ಹಲ್ಲೆ ನಡೆಸಿದ ಬಳಿಕ ವೇಣುಗೋಪಾಲಸ್ವಾಮಿಯನ್ನ ಮತ್ತೆ ಹಾಸ್ಟೆಲ್ ನಲ್ಲಿ ಬಿಟ್ಟು ಹೋಗಿದ್ದು, ಈ ಬಗ್ಗೆ ಯಾರಿಗಾದ್ರೂ ಹೇಳಿ ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಯುವಕ ವೇಣುಗೋಪಾಲಸ್ವಾಮಿ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv