ಶಿವಮೊಗ್ಗ: ಮೋಸ ಹೋಗುವ ಜನ ಇರುವವರೆಗೆ ಮೋಸ ಮಾಡೋ ಜನ ಇದ್ದೇ ಇರುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಶಿವಮೊಗ್ಗದಲ್ಲಿ ಚೀಟಿ ಹೆಸರಿನಲ್ಲಿ ವಂಚಕನೋರ್ವ ಕೋಟ್ಯಂತರ ರೂ. ಹಣ ದೋಚಿಕೊಂಡು ಜನರಿಗೆ ಪಂಗನಾಮ ಹಾಕಿದ್ದಾನೆ.
ನಗರದ ಬಿ.ಎಚ್ ರಸ್ತೆಯಲ್ಲಿ ತುಂಗಾ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ಅದರ ಸಂಸ್ಥಾಪಕ ಶಂಕರ್ ನಾಗ್ ನೂರಾರು ಮಂದಿಯಿಂದ ಚೀಟಿ ಹಾಗು ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದನು. ಈತನನ್ನು ನಂಬಿ ನೂರಾರು ಮಂದಿ ಅಮಾಯಕರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಕಷ್ಟಪಟ್ಟು ದುಡಿದಿದ್ದ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಇದೀಗ ಹಣ ವಸೂಲಿ ಮಾಡಿಕೊಂಡ ಶಂಕರ್ ನಾಗ್ ಕಳೆದೊಂದು ವಾರದಿಂದ ಕಚೇರಿಯ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾನೆ.
ಸುಮಾರು 4 ಕೋಟಿಗೂ ಅಧಿಕ ಹಣದೊಂದಿಗೆ ಜಾಗ ಖಾಲಿ ಮಾಡಿದ್ದಾನೆ. ಶಂಕರ್ ನಾಗ್ ಬಳಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ನೂರಾರು ಮಂದಿ ಆತಂಕಕ್ಕೊಳಗಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಹಣದೊಂದಿಗೆ ನಾಪತ್ತೆಯಾಗಿರುವ ಶಂಕರ್ ನಾಗ್ನನ್ನು ಪತ್ತೆ ಹಚ್ಚಿ, ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಹಣಹೂಡಿದವರು ಮನವಿ ಮಾಡಿಕೊಂಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.