ನವದೆಹಲಿ: ಮೈಬಣ್ಣದ ಕುರಿತಾಗಿ ಸ್ಯಾಮ್ ಪಿತ್ರೋಡಾ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ (Congress) ಪಕ್ಷದ ಮತ್ತೊಬ್ಬ ಮುಖಂಡ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಕೂಡ ಇದೇ ಮಾದರಿಯ ಹೇಳಿಕೆಯನ್ನು ನೀಡಿ ವಿವಾದಕ್ಕೀಡಾಗಿದ್ದಾರೆ.
ಸ್ಯಾಮ್ ಪಿತ್ರೋಡಾ (Sam Pitroda) ಹೇಳಿಕೆಯನ್ನು ನಾನು ವಿರೋಧಿಸಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಎಂದು ಮಾತು ಶುರು ಮಾಡಿದ ಅಧೀರ್, ನಮ್ಮ ದೇಶದಲ್ಲಿ ಪ್ರೊಟೊ ಆಸ್ಟ್ರಾಲೋಯ್ಡ್ಸ್, ಮಂಗೊಲಾಯ್ಡ್ ಕ್ಲಾಸ್ ಮತ್ತು ನೆಗ್ರಿಟಾ (ನೀಗ್ರೋ) ಕ್ಲಾಸ್ ಜನ ಕೂಡ ಇದ್ದಾರೆ. ಇದು ನಮ್ಮ ದೇಶದ ಜನಸಂಖ್ಯಾ ಸ್ವರೂಪ. ಪ್ರಾದೇಶಿಕ ಸ್ವರೂಪ. ಸ್ಯಾಮ್ ಅವರ ವೈಯಕ್ತಿಕ ಹೇಳಿಕೆ ಸರಿಯಾಗಿಯೇ ಇದೆ. ಕೆಲವರು ಬೆಳ್ಳಗೆ, ಕೆಲವರು ಕಪ್ಪಗೆ ಇದ್ದಾರೆ. ಇದೇ ಸತ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ – ಸ್ಯಾಮ್ ಪಿತ್ರೋಡಾ ತಲೆದಂಡ
ಸ್ಯಾಮ್ ಹೇಳಿದ್ದೇನು..?: ಭಾರತದ ಪೂರ್ವದ ಜನರು ಚೀನಿಯರಂತೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದವರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ನಾವೆಲ್ಲರೂ ಸಹೋದರ -ಸೋದರಿಯರಂತೆ ಜೀವಿಸುತ್ತಿದ್ದೇವೆ ಎಂದು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದರು.
ಸ್ಯಾಮ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದ್ದು, ನಾಯಕರು ಸೋಶಿಯಲ್ ಮೀಡಿಯಾದಲ್ಲಿ ಕೈ ನಾಯಕನ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೇ ಸ್ಯಾಮ್ ಪಿತ್ರೊಡಾ ವಿರುದ್ಧ ವಿವಿಧೆಡೆ ಪ್ರತಿಭಟನೆಗಳು ಕೂಡ ನಡೆದಿವೆ. ಸಚಿವ ಹೆಚ್ಕೆ ಪಾಟೀಲ್, ವಿಪಕ್ಷ ನಾಯಕ ಅಶೋಕ್ ಸೇರಿ ಹಲವರು ಖಂಡಿಸಿದ್ದಾರೆ.