ರಾಯಚೂರು: ನಗರಸಭೆ ನಿರ್ಲಕ್ಷ್ಯದಿಂದ ಕಲುಷಿತ ನೀರು ಕುಡಿದು ಐವರು ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರಗಳಿಂದ ಸಾವಿರಾರು ಜನ ಅನಾರೋಗ್ಯಕ್ಕೀಡಾಗಿದ್ದರು ಜಿಲ್ಲೆಯ ಕಡೆ ಮುಖಮಾಡದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕೊನೆಗೂ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಚೆಕ್ ವಿತರಣೆ ಮಾಡಿದ್ದಾರೆ.
ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ನಗರಸಭೆ ಕಲುಷಿತ ನೀರಿನ ಅವಾಂತರ ಒಂದು ಹಂತಕ್ಕೆ ಬರುತ್ತಿರುವ ಹಿನ್ನೆಲೆ ಈಗ ಜಿಲ್ಲೆಗೆ ಭೇಟಿ ನೀಡಿದ್ದಾರೆ. ರಾಂಪೂರ ಜಲಶುದ್ಧೀಕರಣಕ್ಕೆ ಭೇಟಿ ನೀಡಿದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಪರಿಶೀಲಿಸಿ ನೀರು ಕುಡಿದಿದ್ದಾರೆ.
ಸರ್ಕಾರ ಈ ಕುರಿತು ಎಲ್ಲ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಉಳಿದ ತಪ್ಪಿತಸ್ಥರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಲು ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಿತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಧನಸಹಾಯ ಮಾಡುತ್ತಿದ್ದ 4ನೇ ಶಂಕಿತ ಅರೆಸ್ಟ್
ನಗರಸಭೆ ನಿರ್ಲಕ್ಷ್ಯದಿಂದಾದ ಘಟನೆಗೆ ವಿಷಾದ ವ್ಯಕ್ತಪಡಿಸಿ, ನಗರಸಭೆ, ಜಿಲ್ಲಾಡಳಿತದ ಜವಾಬ್ದಾರಿ ಮುಖ್ಯವಾಗಿರುವುದರಿಂದ ಜಿಲ್ಲೆಗೆ ತಡವಾಗಿ ಬಂದಿದ್ದೇನೆ. ಆದ್ರೆ ಎಲ್ಲ ವರದಿಗಳನ್ನ ನಾನು ಇರುವ ಕಡೆಗೆ ತರಿಸಿಕೊಂಡು ಪರಿಶೀಲನೆ ಮಾಡಿದ್ದೇನೆ ಎಂದಿದ್ದಾರೆ.
ಚೆಕ್ ವಿತರಣೆ
ಇದೇ ವೇಳೆ ನಗರಸಭೆ ವತಿಯಿಂದ ಮೃತರ ಕುಟುಂಬಗಳಿಗೆ ಘೋಷಿಸಲಾಗಿದ್ದ 10 ಲಕ್ಷ ರೂ. ಪರಿಹಾರ ಚೆಕ್ನ್ನು ಮೃತ ಮಲ್ಲಮ್ಮ, ನೂರ್ ಮಹಮ್ಮದ್, ಅಬ್ದುಲ್ ಗಫರ್ ಕುಟುಂಬಕ್ಕೆ ವಿತರಣೆ ಮಾಡಲಾಯಿತು. ಇದನ್ನೂ ಓದಿ: ತಡರಾತ್ರಿ ಬಸವಕಲ್ಯಾಣದಲ್ಲಿ ಮುಸ್ಲಿಮರಿಂದ ದಿಢೀರ್ ಪ್ರತಿಭಟನೆ – ವ್ಯಕ್ತಿ ಅರೆಸ್ಟ್
ಅಬ್ದುಲ್ ಕರೀಂ ಹಾಗೂ ಜನಕರಾಜ್ ಕುಟುಂಬಕ್ಕೆ ವೈದ್ಯಕೀಯ ವರದಿ ಬಂದ ಬಳಿಕ ಚೆಕ್ ವಿತರಣೆ ಭರವಸೆ ನೀಡಲಾಗಿದೆ. ಆಸ್ಪತ್ರೆಗೆ ದಾಖಲಾದವರ ಅಂಕಿ ಅಂಶ ಸಿಗದ ಹಿನ್ನೆಲೆ ಚಿಕಿತ್ಸಾ ವೆಚ್ಚ ವಿತರಣೆ ವಿಳಂಬವಾಗಿದೆ. ಚೆಕ್ ಪಡೆದ ಮೃತರ ಕುಟುಂಬಸ್ಥರು ಕಷ್ಟದಲ್ಲಿ ಇಷ್ಟಾದರೂ ಸಹಾಯ ಮಾಡಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ರಾಯಚೂರಿನ ಕಲುಷಿತ ನೀರಿನ ಪ್ರಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಆದ್ರೆ ನಗರಸಭೆ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳು ದುಃಖದಲ್ಲಿವೆ.