ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ನಿವಾಸಿಗಳು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಪರಿತಪಿಸುವಂತಾಗಿದೆ.
ತಾಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿ, ಕಳೆದ ಒಂದು ವರ್ಷದಿಂದ ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದಿದೆ. ಮನೆಯ ಮುಂಭಾಗದಲ್ಲೇ ವಿದ್ಯುತ್ ತಂತಿ ಹಾಯ್ದು ಹೋಗಿದ್ದು, ರೈತರು ತಮ್ಮ ಮನೆಯಿಂದ ಜಮೀನಿಗೆ ಹೋಗಬೇಕಾದರೆ ಇದರ ಕೆಳ ಭಾಗದಲ್ಲೇ ಹೋಗಬೇಕಾಗಿದೆ.
ಈಗಾಗಲೇ ಇಲ್ಲಿನ ರೈತರು ಹಾಗೂ ಗ್ರಾಮಸ್ಥರು ವಿದ್ಯುತ್ ತಂತಿ ತಗುಲಿ ಅನೇಕ ಬಾರಿ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾರೆ. ವಿದ್ಯುತ್ ತಂತಿಗಳ ದುರಸ್ಥಿ ಕಾರ್ಯ ಮಾಡುವಂತೆ, ನೆಲಮಂಗಲ ಬೆಸ್ಕಾಂ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.
ಇನ್ನು ಈ ವಿಚಾರದಲ್ಲಿ ಲೈನ್ ಮ್ಯಾನ್ಗಳಿಗೆ ತಿಳಿಸಿದರೆ ಬಾಯಿಗೆ ಬಂದ ಹಾಗೆ ಹಣ ಕೇಳುತಿದ್ದು, ಹಣ ಕೊಡಲಾಗದೇ ಇತ್ತ ಭಯದಲ್ಲಿ ಇಡೀ ಗ್ರಾಮವೇ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಪ್ರತಿನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ.