ಅಮೇಥಿ: ಇದೀಗ ಜನರು ಸಿಂಗಾಪುರ, ಕ್ಯಾಲಿಫೋರ್ನಿಯ ಕುರಿತು ಮಾತನಾಡುತ್ತಿದ್ದಂತೆಯೇ, ಇನ್ನು 10-15 ವರ್ಷಗಳಲ್ಲಿ ಅಮೇಥಿ ಬಗ್ಗೆ ಕೂಡ ಮಾತನಾಡುವಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಬಹಳಷ್ಟು ಹೊಸ ಪ್ರಾಜೆಕ್ಟ್ ಗಳನ್ನು ಅಮೇಥಿಯಿಂದ ಹೊರಗೆ ತೆಗೆದುಕೊಂಡು ಹೋಗಿದೆ. ಐಐಟಿ, ಮೆಗಾ ಫುಡ್ ಪಾರ್ಕ್, ಪೇಪರ್ ಮಿಲ್ ಅನ್ನು ಅಮೇಥಿಗೆ ತರಲು ಬಹಳ ಪ್ರಯತ್ನ ಪಟ್ಟಿದ್ದೆ. ಬಂದಿದ್ದರೆ ಬಹಳ ಮಂದಿ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಅಮೇಥಿಯ ಯುವಕರ ದೃಷ್ಟಿಯಿಂದ ಹೊಸ ಯೋಜನೆಗಳನ್ನು ತರಲು ಮತ್ತೊಮ್ಮೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಯುವಕರು ಉದ್ಯೋಗಸ್ಥರಾಗುವುದರ ಮೂಲಕ ದೇಶ ಅಭಿವೃದ್ಧಿಯನ್ನು ಕಾಣಬೇಕಿದೆ. ನೆಹರು, ವಾಜಪೇಯಿ ಅವರು ಭವಿಷ್ಯದ ಕುರಿತು ಮಾತನಾಡುತ್ತಿದ್ದರು. ಆದರೆ ಈಗಿನ ಪ್ರಧಾನಿಗಳು ಹಿಂದಿನ ವಿಚಾರವನ್ನು ಮಾತನಾಡಿ ದ್ವೇಷವನ್ನು ಹರಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
2009ರ ಲೋಕಸಭಾ ಚುನಾವಣೆಯಲ್ಲಿ 3.7 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ ಗಾಂಧಿಯವರು, 2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ 1.07 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.