ದಾವಣಗೆರೆ: ತುಂಗ ಹಾಗೂ ಭದ್ರಾ ನದಿಯ ನೀರು ಹೊರ ಬಿಟ್ಟ ಪರಿಣಾಮ ದಾವಣಗೆರೆಯ ನದಿಯ ತಟದಲ್ಲಿರುವ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಇದರಿಂದಾಗಿ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.
ಚಿಕ್ಕಬಿದರಿ ಹಾಗೂ ಸಾರಥಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ಸೇತುವೆ ಮುಳುಗಡೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಅದರಲ್ಲೂ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ನೂರಾರು ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ. ಎರಡು ಗ್ರಾಮಗಳಿಗೆ ಸಂಚರಿಸಲು ಬೋಟ್ ಬಿಟ್ಟಿದ್ದು ಅದು ಕೂಡ ಉಪಯೋಗವಿಲ್ಲದಂತಾಗಿದೆ. ಶಾಸಕರು ಅಧಿಕಾರಿಗಳು ಬಂದಾಗ ಮಾತ್ರ ಬೋಟ್ ಸರಿಯಾಗಿ ಕೆಲಸ ಮಾಡುತ್ತದೆ ಬಾಕಿ ಸಮಯದಲ್ಲಿ ಕೆಟ್ಟು ನಿಂತಿರುತ್ತದೆ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ.
ಬೆಳಗ್ಗೆಯಿಂದಲೇ ಗ್ರಾಮದ ಜನರು ಕೆಲಸ ಕಾರ್ಯಗಳಿಗೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಬೋಟ್ ನ ವ್ಯವಸ್ಥೆ ಇದ್ದು, ಅದು ಕೂಡ ಕೇವಲ ಎರಡ್ಮೂರು ಬಾರಿ ಮಾತ್ರ ಸಂಚರಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದಾರೆಯೇ ವಿನಃ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿಲ್ಲ. ಅಲ್ಲದೆ ನದಿಯ ತಟದಲ್ಲಿರುವ ಹೊಲ ಗದ್ದೆಗಳು ಸಂಪೂರ್ಣವಾಗಿ ಮುಳುಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv