ನವದೆಹಲಿ: ಈ ವರ್ಷ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸಾಧಾರಣ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಕೆಜಿ ರಮೇಶ್ ಹೇಳಿದ್ದಾರೆ.
ಈ ಬಾರಿ ದೀರ್ಘಾವಧಿಯಲ್ಲಿ ಶೇ. 97ರಷ್ಟು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ. ಮೇ ತಿಂಗಳ ಮಧ್ಯದಲ್ಲಿ ಮುಂಗಾರು ಪ್ರವೇಶಿಸುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ನಾಲ್ಕು ತಿಂಗಳ ಅವಧಿಯಲ್ಲಿ ಕೆಲವೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕೂಡ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಶೇಕಡ 95ರಷ್ಟು ಮಳೆಯಾಗಿತ್ತು ಎಂದು ಹೇಳಿದರು.
ಹವಾಮಾನ ಇಲಾಖೆಯ ಲೆಕ್ಕಾಚಾರದ ಅನ್ವಯ ಸಾಮಾನ್ಯ ಸರಾಸರಿಗಿಂತ ಶೇ.90ರಷ್ಟು ಕಡಿಮೆ ಮಳೆ ಬಿದ್ದರೆ ಅದನ್ನು ಮಳೆ ಕೊರತೆ ಎಂದು, ಶೇ.90-96ರ ಸರಾಸರಿಯಲ್ಲಿದ್ದರೆ ಅದನ್ನು ಸಾಧಾರಣಕ್ಕಿಂತ ಕಡಿಮೆ ಎಂದು, ಶೇ.96-104ರ ಪ್ರಮಾಣದಲ್ಲಿದ್ದರೆ ಅದನ್ನು ಸಾಧಾರಣ ಮಳೆ ಎಂದು, ಶೇ.110ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಹೆಚ್ಚಿನ ಮಳೆ ಎಂದು ಕರೆಯಲಾಗುತ್ತದೆ.
ಕಳೆದ ವರ್ಷ ಕೂಡ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಶೇಕಡ 95ರಷ್ಟು ಮಳೆಯಾಗಿತ್ತು. 2015, 2014ರಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿತ್ತು. ಆ ಎರಡೂ ವರ್ಷಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.