ಬೆಂಗಳೂರು: ಐಎಂಎ ಪ್ರಕರಣ ಆರೋಪಿ ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲಿ ಅಂತ ಪ್ರಾರ್ಥಿಸಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಜ್ ಯಾತ್ರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾಗವಾರದ ತಿರುಮೇನಹಳ್ಳಿಯ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ್ದರು. ಮಾಜಿ ಸಚಿವ ರೋಷನ್ ಬೇಗ್ ಅವರು ಕೂಡ ಆಗಮಿಸಿ, ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಅವರು, ಮನ್ಸೂರ್ ಖಾನ್ ನೀವು ಭಾರತಕ್ಕೆ ಬನ್ನಿ. ನಿಮ್ಮ ಜೊತೆ ಸರ್ಕಾರವಿದೆ. ನಾನು ಕೂಡ ನಿಮ್ಮೊಂದಿಗೆ ಇದ್ದೇನೆ. ಅದು ಬಡವರ ಹಣ. ಬಡವರು ಕಷ್ಟು ಪಟ್ಟು ಕೂಡಿಟ್ಟ ಹಣವನ್ನು ನಿಮಗೆ ಕೊಟ್ಟಿದ್ದಾರೆ. ಕೂಡಲೇ ನೀವು ಭಾರತಕ್ಕೆ ಬನ್ನಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.
ಈ ಮಧ್ಯೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಚಿವರು, ಕೇವಲ ರಾಜಕೀಯ ಸುದ್ದಿಗಳನ್ನು ತೋರಿಸುವುದಲ್ಲ ಹಜ್ ಭವನದ ಸಮಸ್ಯೆ, ಭವನಗಳ ಬಗ್ಗೆಯೂ ಸುದ್ದಿ ಮಾಡಿ. ಎಲ್ಲೆಲ್ಲಿ ಸಮಸ್ಯೆ ಇದೆ ಅದನ್ನು ತೋರಿಸಿ. ಅದು ಬಿಟ್ಟು ಕೇವಲ ರಾಜಕೀಯ ಸುದ್ದಿನೇ ತೋರಿಸಬೇಡಿ ಎಂದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.