ಬೆಂಗಳೂರು: ನಗರದ ಪೊಲೀಸರು ಭರ್ಜರಿ ಬೇಟೆಗೆ ಕೌಂಟ್ಡೌನ್ ಶುರು ಮಾಡಿದ್ದಾರೆ. ಐಎಂಎ ಮಾಲೀಕ ಮನ್ಸೂರ್ ಖಾನ್ ಜೊತೆ ಪೊಲೀಸರು ಸಂಪರ್ಕ ಸಾಧಿಸಿದ್ದು, ಮೂರ್ನಾಲ್ಕು ದಿನದಲ್ಲಿ ಐಎಂಎ ವಂಚಕ ಮನ್ಸೂರ್ ಖಾನ್ ನನ್ನು ವಶಕ್ಕೆ ಪಡೆಯಲಿದ್ದಾರೆ. ಇನ್ನೊಂದು ವಾರದಲ್ಲಿ ಐಎಂಎ ವಂಚಕನನ್ನ ಬೆಂಗಳೂರಿಗೆ ಕರೆತರಲು ಪೊಲೀಸರು ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಅರಬ್ ದೇಶದ ರಾಸ್-ಅಲ್-ಖೈಮಾ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿರುವ ಬೆಂಗಳೂರು ಪೊಲೀಸರು ಕಾನೂನು ಪ್ರಕ್ರಿಯೆ ಮುಗಿದ್ರೆ ಇನ್ನೊಂದೆ ಒಂದು ವಾರದಲ್ಲಿ ಬೆಂಗಳೂರಿಗೆ ಕರೆತರಲಿದ್ದಾರೆ. ಹೆಚ್ಚಿನ ಕಾನೂನು ಪ್ರಕ್ರಿಯೆ ಇಲ್ಲದೆ ನೇರವಾಗಿ ಡಿಪೋರ್ಟ್ ಮಾಡಲು ತಯಾರಿ ನಡೆಸಲಾಗಿದೆ. ಇಬ್ಬರು ಅಧಿಕಾರಗಳ ಜೊತೆ ಕೂರಿಸಿ ಮನ್ಸೂರ್ ಅನ್ನು ಬೆಂಗಳೂರಿಗೆ ಕರೆತರಲು ಸಿದ್ಧತೆ ನಡೆಸಲಾಗಿದೆ.
ಸಂಸತ್ತಿನಲ್ಲಿ ಐಎಂಎ ದೋಖಾ ಪ್ರಕರಣ ಪ್ರಸ್ತಾಪವಾಗುತ್ತಿದ್ದಂತೆಯೇ ಚುರುಕಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅರಬ್ ದೇಶದ ರಾಸ್ ಆಲ್ ಖೈಮಾದಲ್ಲಿರುವ ಮನ್ಸೂರ್ಖಾನ್ನನ್ನು ಭಾರತಕ್ಕೆ ಕರೆತರುವ ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಶುರು ಮಾಡಿತು. ಜೊತೆಗೆ ಮನ್ಸೂರ್ ಖಾನ್ ಇತ್ತೀಚಿಗಷ್ಟೇ ವಿಡಿಯೋ ಅಪ್ಲೋಡ್ ಮಾಡಿ ತಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗುವ ಸಾಧ್ಯತೆ ಇದ್ದು, ತನ್ನ ರಕ್ಷಣೆಗೆ ನಿಂತರೆ ಬೆಂಗಳೂರಿಗೆ ಬರೋದಾಗಿ ಘೋಷಿಸಿದ್ದನು.
ತನ್ನನ್ನು ವಾಟ್ಸಪ್ ನಂಬರ್ ಮೂಲಕ ಸಂಪರ್ಕಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ಗೆ ಮನವಿ ಮಾಡಿದ್ದನು. ಕಳೆದ ಹದಿನೈದು ದಿನದ ಹಿಂದೆಯೇ ಪಬ್ಲಿಕ್ ಟಿವಿ, ರಾಸ್ ಆಲ್ ಖೈಮಾದಲ್ಲಿ ಮನ್ಸೂರ್ ಖಾನ್ ತಲೆ ಮರೆಸಿಕೊಂಡಿರುವ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ಮನ್ಸೂರ್ಖಾನ್ರನ್ನು ಬೆಂಗಳೂರಿಗೆ ಕರೆ ತಂದರೆ ದೊಡ್ಡ ದೊಡ್ಡವರ ಮತ್ತಷ್ಟು ಜಾತಕ ಬಯಲಾಗೋದ್ರಲ್ಲಿ ಯಾವುದೇ ಸಂಶಯ ಇಲ್ಲ.