ಹಾಸನ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಈಗಲೂ ಬದ್ಧ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಕಲಾಭವನ ಆವರಣದಲ್ಲಿ 5 ದಿನಗಳ ಮಾವು ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ರಾಜೀನಾಮೆ ವಿಚಾರದ ಬಗ್ಗೆ ಈಗಾಗಲೇ ದೊಡ್ಡವರ ಮುಂದೆ ಇಟ್ಟಿದ್ದೇನೆ. ಇದೇ ತಿಂಗಳ 17 ಅಥವಾ 18ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಪ್ರಧಾನಿ ಮಂತ್ರಿ ಎಲ್ಲ ಸಂಸದರಿಗೂ ಹೇಳಿದ್ದಾರೆ. ನಾನು 17 ಅಥವಾ 18ರಂದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸುವೆ. ನಾನು ನನ್ನ ರಾಜೀನಾಮೆ ನಿರ್ಧಾರಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದರು.
ವಿಶ್ವನಾಥ್ ಅವರ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ವಿಶ್ವನಾಥ್ ಅವರು ಕೆಲ ವಿಚಾರಗಳಿಗೆ ಬೇಸರ ಮಾಡಿಕೊಂಡಿದ್ದರು. ಆದರೆ ಈಗ ದೇವೇಗೌಡರು ಹಾಗೂ ಕುಮಾರಣ್ಣ ವಿಶ್ವನಾಥ್ ಅವರ ಮನವೊಲಿಸಿದ್ದಾರೆ. ಬುಧವಾರ ನಡೆದ ಜೆಡಿಎಲ್ಪಿ ಸಭೆಯಲ್ಲಿ ಅವರೂ ಭಾಗಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ನಾವು ಪಕ್ಷ ಕಟ್ಟುತ್ತೇವೆ. ಎರಡು ಮೂರು ದಿನದಲ್ಲಿ ವಾಪಸ್ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯಂತರ ಚುನಾವಣೆ ಬಗ್ಗೆ ನಿಖಿಲ್ ಕುಮಾರ್ ಹೇಳಿಕೆ ವಿಚಾರದ ಮಾತನಾಡಿ, ಈ ಬಗ್ಗೆ ನನಗೇನೂ ಗೊತ್ತಿಲ್ಲ ಅವರನ್ನೇ ಕೇಳಿ ಎಂದು ಹೇಳಿದ್ದಾರೆ. ಅಲ್ಲದೆ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಈ ಸರ್ಕಾರ ಸುಭದ್ರವಾಗಿರಲಿದೆ. ಸಿಎಂ ಕುಮಾರಸ್ವಾಮಿ ಅವರು ಇನ್ನೂ ಉತ್ತಮ ಯೋಜನೆ ಕೊಡಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.