ಬೆಂಗಳೂರು: ಇದು ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕಟ್ಟಿಹಾಕಲು ಯತ್ನಿಸಿದ ಮೂಲ ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಕೊಟ್ಟ ಡಬಲ್ ಡಿಚ್ಚಿ. ವಿಪಕ್ಷ ನಾಯಕ ಸ್ಥಾನ ಸಿದ್ದರಾಮಯ್ಯರ ಪಾಲಾದರೆ, ಕೆಪಿಸಿಸಿ ಹಾಗೂ ಸಿಎಲ್ ಪಿಯಲ್ಲಿ ಉತ್ತರ ಕರ್ನಾಟಕದವರಿಗೆ ಮಣೆ ಹಾಕಿ ಎಂದು ಮೂಲ ಕಾಂಗ್ರೆಸ್ಸಿಗರು ಹೊಸ ವರಸೆ ತಗೆದಿದ್ದಾರೆ ಎನ್ನಲಾಗಿದೆ.
ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ನಾಯಕ ಎರಡು ಸ್ಥಾನ ತಮಗೆ ಇರಲಿ ಎಂದುಕೊಂಡಿರುವ ಸಿದ್ದರಾಮಯ್ಯ. ಅವಕಾಶ ಸಿಕ್ಕರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ತಮ್ಮ ಬೆಂಬಲಿಗರೇ ಬರಲಿ ಎಂದು ದಾಳ ಉರುಳಿಸುತ್ತಿದ್ದಾರೆ. ಅದಕ್ಕೆ ಕೌಂಟರ್ ಹೊಡೆದ ಮೂಲ ಕಾಂಗ್ರೆಸ್ಸಿಗರು ಉತ್ತರ ಕರ್ನಾಟಕ ಭಾಗಕ್ಕೆ ಮಣೆ ಹಾಕಬೇಕು ಎಂದು ಪ್ರತ್ಯಸ್ತ್ರ ಹೂಡಿದ್ದಾರೆ. ಇದಕ್ಕೆ ಟಕ್ಕರ್ ಕೊಡಲು ಮುಂದಾದ ಸಿದ್ದರಾಮಯ್ಯ ನಾನು ಹಳೆ ಮೈಸೂರು ಭಾಗದವನಿರಬಹುದು, ಆದರೆ ಉತ್ತರ ಕರ್ನಾಟಕದ ಬದಾಮಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದ್ದರಿಂದ ನಾನೇ ಉತ್ತರದವನೇ ಅಲ್ವಾ? ಎಂಬ ಹೊಸ ಲಾಜಿಕ್ ಮುಂದಿಟ್ಟಿದ್ದಾರೆ. ಶತಾಯಗತಾಯ ಸಿದ್ದರಾಮಯ್ಯರನ್ನ ಯಾವುದಾದರು ಒಂದು ಸ್ಥಾನಕ್ಕೆ ಸೀಮಿತ ಮಾಡಬೇಕು ಎಂಬ ಹಠಕ್ಕೆ ಬಿದ್ದಿರುವ ಪಕ್ಷದೊಳಗಿನ ವಿರೋಧಿ ಬಣ ಉತ್ತರದ ಅಸ್ತ್ರ ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರದ ಅಸ್ತ್ರಕ್ಕೆ ಉತ್ತರವು ನಾನೇ, ದಕ್ಷಿಣವು ನಾನೇ ಎಂದು ಲಾಜಿಕಲ್ ವಾದವನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಆದರೆ ವಿರೋಧಿಗಳಿಗೆ ಉತ್ತರವು ನಾನೇ ದಕ್ಷಿಣವು ನಾನೇ ಎಂಬ ಉತ್ತರ ಕೊಟ್ಟು ಸೆಡ್ಡು ಹೊಡೆದ ಸಿದ್ದರಾಮಯ್ಯ ನಡೆ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತಷ್ಟು ಕದನ ಕುತೂಹಲ ಮೂಡಿಸಿದೆ.