ಬೆಳಗಾವಿ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಪತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಕಣರ್ಗಿ ಗ್ರಾಮದಲ್ಲಿ ನಡೆದಿತ್ತು. ಈ ಹಿನ್ನೆಲೆ ಆರೋಪಿಯನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಣರ್ಗಿ ಗ್ರಾಮದ ಪರಶುರಾಮ ಕುರುಬರ ಬಂಧಿತ ಆರೋಪಿ. ಕೊಲ್ಹಾಪುರ ಜಿಲ್ಲೆಯ ಚಂದಗಡದ ಸಂತೋಷ ನಾರಾಯಣ ಪರೀಟ್ (36) ಕೊಲೆಯಾದ ವ್ಯಕ್ತಿ.
ಆರೋಪಿಯೊಂದಿಗೆ ಕೊಲೆಗೀಡಾದ ಸಂತೋಷ್ನ ಪತ್ನಿ ರೂಪಾ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಲ್ಲದೇ ಪತಿಯನ್ನು ಬಿಟ್ಟು ಪರಶುರಾಮನೊಂದಿಗೆ ಕಣರ್ಗಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಸಂತೋಷ್ ಮಾ.1ರಂದು ಪತಿಯು ರೂಪಾಳನ್ನು ಭೇಟಿ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಆರೋಪಿ ಪರಶುರಾಮ ಕುರುಬರ ಕಣರ್ಗಿ ಬಸ್ ತಂಗುದಾಣದಲ್ಲಿ ಸಂತೋಷ್ನನ್ನು ನೋಡಿ ತಕ್ಷಣ ಆತನನ್ನು ದ್ವಿಚಕ್ರ ವಾಹನ ಮೇಲೆ ಕೂರಿಸಿಕೊಂಡಿದ್ದಾನೆ. ನಂತರ ಸುರಭಿ ಕ್ರಾಸ್ ಬಳಿ ಇರುವ ನ್ಯೂ ರೇಣುಕಾ ನಗರ ಹತ್ತಿರವಿದ್ದ ವಂಟಮೂರಿ ಕಾಲೋನಿಯ ಯಲ್ಲಪ್ಪ ಬುಡುಗ ಎಂಬವರ ಕೃಷಿ ಜಮೀನಿಗೆ ಕರೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿಸಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್
ನಶೆಯಲ್ಲಿ ಆರೋಪಿ ಪರಶುರಾಮ ತನ್ನ ಬಳಿಯಿದ್ದ ಟವೆಲ್ನಿಂದ ಸಂತೋಷನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಸಂತೋಷನ ಶವವನ್ನು ಭತ್ತದ ಒಣಹುಲ್ಲಿನ ಬಣವಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದನು. ಇತ್ತ ಭತ್ತದ ಬಣಿವೆಯಲ್ಲಿದ್ದ ಮೃತದೇಹ ಸುಟ್ಟುಕರಕಲಾಗಿತ್ತು. ಎಂದಿನಂತೆ ತನ್ನ ಜಮೀನಿಗೆ ಮಾ. 2ರಂದು ಆಗಮಿಸಿದ್ದ ಜಮೀನಿನ ಮಾಲೀಕ ಯಲ್ಲಪ್ಪಾ ಅರೆಬೆಂದ ದೇಹವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಆಪರೇಷನ್ ಗಂಗಾ ಯಶಸ್ಸಿಗೆ ಭಾರತದ ಜಾಗತಿಕ ಪ್ರಭಾವವೇ ಕಾರಣ: ಮೋದಿ
ನಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಕೊಲೆಗೈದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ ಹೊನ್ನಪ್ಪ ತಳವಾರ, ಪ್ರೋಬೆಶನರಿ ಪಿಎಸ್ಐ ಶ್ರೀಶೈಲ್ ಹುಳಗೇರಿ ತಂಡ ಯಶಸ್ವಿಯಾಗಿದೆ.