ಕಲಬುರಗಿ: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಹಂಚಿಕೆ (Rajiv Gandhi Housing Scheme) ವಿಚಾರದಲ್ಲಿ ಹಗರಣ ನಡೆದಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್ ಪಾಟೀಲ್ (BR Patil) ಅವರ ಆಡಿಯೋವೊಂದು ಕಳೆದ ಮೂರು ದಿನಗಳಲ್ಲಿ ಹಿಂದೇ ವೈರಲ್ ಆಗಿ, ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿತ್ತು. ಇದೀಗ, ನನ್ನ ಕ್ಷೇತ್ರದಲ್ಲಿ ನನಗೆ ತಿಳಿಯದೆ ಕಾಮಗಾರಿಗಳು ನಡೆಯುತ್ತಿವೆ ಎನ್ನುವ ಮೂಲಕ ಬಿ.ಆರ್ ಪಾಟೀಲ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಖುದ್ದು ನನ್ನ ಕ್ಷೇತ್ರದಲ್ಲಿ ನನಗೆ ಗೊತ್ತಿಲ್ಲದೇ ಕೆಲವು ಸರ್ಕಾರಿ ಕಾಮಗಾರಿ ನಡೆಯುತ್ತಿವೆ. ನನ್ನ ಕ್ಷೇತ್ರದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗುತ್ತಿದೆ. ಅಲ್ಪಸಂಖ್ಯಾತ ಇಲಾಖೆಯಿಂದ 17 ಕೋಟಿ ರೂ. ಹಣ ಬಂದಿದೆ. ಕಾಮಗಾರಿ ಸಹ ಶುರುವಾಗಿದೆ. ಗುದ್ದಲಿ ಪೂಜೆಗೂ ನನಗೆ ಕರೆಯದೇ, ಶಿಷ್ಟಾಚಾರದ ಉಲ್ಲಂಘನೆ ಮಾಡಲಾಗಿದೆ. ಒಬ್ಬ ಶಾಸಕನಾಗಿ ಹಣ ಬಂದಿರುವುದು, ಕೆಲಸ ಶುರುವಾಗಿರುವುದು ನನಗೆ ತಿಳಿದೇ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈಗಾಗಲೇ, ನನ್ನ ಕ್ಷೇತ್ರದಲ್ಲಿ ಮೌಲಾನ ವಸತಿ ಶಾಲೆ, ಕಾಂಪೌಂಡ್ ಕಟ್ಟಿಸಲಾಗಿದೆ. ಆದರೂ, ಅಲ್ಪಸಂಖ್ಯಾತರ ಇಲಾಖೆಯಿಂದ 17 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲ. ಹಣ ಬಿಡುಗಡೆ ಮಾಡಲಾಗಿದೆ ಎಂದು ನನಗೆ ತಿಳಿಸಿದರೆ, ಕೆಕೆಆರ್ಡಿಬಿ ತಂದ ಅನುದಾನ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದೆ. ಆದರೆ ಮೈನಾರಿಟಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಮಾಹಿತಿಯೇ ಇಲ್ಲ ಎಂದರು.
ಆಡಿಯೋ ವೈರಲ್ ಹೇಗಾಯ್ತು ಗೊತ್ತಿಲ್ಲ:
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ಮಾತಾಡಿದ್ದು ನಿಜ. ಸರ್ಫರಾಜ್ ಖಾನ್ಗೆ ಒಂದು ಮನವಿ ಮಾಡಲು ಫೋನ್ ಮಾಡಿದ್ದೆ. ಈ ಹಿಂದೇ ಹೇಳಿದ್ದರೂ ಮನೆಗಳು ಮಂಜೂರು ಆಗಿರಲಿಲ್ಲ. ಅದಕ್ಕೆ ಮತ್ತೊಮ್ಮೆ ಫೋನ್ ಮಾಡಿ ಮಾತಾಡಿದ್ದೇನೆ. ನನ್ನ ಫೋನ್ನಿಂದಲೇ ಮಾತಾಡಿದ್ದೇವೆ. ಆದರೆ ಆಡಿಯೋ ಲೀಕ್ ಹೇಗಾಯ್ತು ಎಂದು ಗೊತ್ತಿಲ್ಲ. ನಾವು ಲೆಟರ್ ಕೊಟ್ಟು ಸುಸ್ತಾದೆವು. ಮನೆಗಳು ಮಂಜೂರು ಮಾಡಲಿಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೇಳಿದರು ಲೇಟರ್ ಹೆಡ್ ಕೊಟ್ಟಿದ್ದೆ. ಅವರಿಗೆ ಮನೆ ಕೊಟ್ಟರು. ಈ ವಿಚಾರಕ್ಕಾಗಿ ನಾನು ಫೋನ್ ಮಾಡಿ ಮಾತಾಡಿದ್ದು. ಆಡಿಯೋದಲ್ಲಿ ನಾನು ಯಾರ ಹೆಸರನ್ನ ಉಲ್ಲೇಖ ಮಾಡಿರಲಿಲ್ಲ. ಯಾವ ಸಚಿವರ ಹೆಸರನ್ನ ತೆಗೆದುಕೊಂಡಿಲ್ಲ. ಈ ಕುರಿತು ತನಿಖೆಯಾದರೇ ಆಗಲಿ ನನ್ನದೇನೂ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಆರೋಪಕ್ಕೆ ಯಾಕೆ ಇಷ್ಟು ಮಹತ್ವ:
ಸಚಿವ ಕೃಷ್ಣಾಭೈರೆಗೌಡ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಜನರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದರೆ ಅಷ್ಟು ಗಂಭೀರವಾಗಿ ಚರ್ಚೆಯಾಗಲಿಲ್ಲ. ಅದೇ ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ ಅಷ್ಟೇ. ಇಷ್ಟು ಗಂಭೀರವಾಗಿ ಚರ್ಚೆ ಆಗುತ್ತದೆ ಎಂದು ಗೊತ್ತಿರಲಿಲ್ಲ. ನಾನೇ ಮಾತಾಡಿದ್ದೇನೆ ಎಂದು ಈಗಾಗಲೇ, ಹೇಳಿದ್ದೇನೆ. ಯಾರೋಬ್ಬ ವ್ಯಕ್ತಿ ಹೆಸರು ತೆಗೆದುಕೊಂಡು ನಾನು ಮಾತಾಡಿಲ್ಲ ಎಂದು ಹೇಳಿದರು.
ಆಡಿಯೋ ವೈರಲ್ ವಿಚಾರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಪತ್ರ ಬರೆದಿಲ್ಲ. ಈ ಕುರಿತು ಮಾತನಾಡಲು ಸಿಎಂ ಕರೆದರೆ ಹೋಗುತ್ತೇನೆ. ಇಲ್ಲಿವರೆಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನಗೆ ಕರೆದಿಲ್ಲ. ಕರೆದರೆ ಹೋಗಿ ಮಾತನಾಡುತ್ತೇನೆ ಎಂದರು.