ಬೆಳಗಾವಿ: ಗೋಮಾಂಸ ಸಾಗಿಸುತ್ತಿದ್ದ ನಾಲ್ವರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಬಳಿ ನಡೆದಿದೆ.
ಎರಡು ಬೊಲೆರೊ ವಾಹನಗಳು ಜೋಯಿಡಾದಿಂದ ಕಾರವಾರಕ್ಕೆ ಶನಿವಾರ ರಾತ್ರಿ ತೆರಳುತ್ತಿದ್ದವು. ಅವುಗಳಲ್ಲಿ ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಕೆಲ ಯುವಕರು ವಾಹನ ತಡೆದು, ಪರಿಶೀಲನೆ ಮಾಡಿದ್ದಾರೆ. ಆಗ ಗೋಮಾಂಸ ಪತ್ತೆಯಾಗಿದೆ. ಇದರಿಂದ ರೊಚ್ಚಿಗೆದ್ದ ಯುವಕರು ವಾಹನಗಳ ಚಾಲಕರು ಹಾಗೂ ಕ್ಲೀನರ್ ಗಳನ್ನು ಹಿಡಿದು ಕಟ್ಟಿಗೆಯಿಂದ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಪ್ಪಾಯಿತು, ನಮ್ಮನ್ನ ಬಿಟ್ಟು ಬಿಡಿ ಎಂದು ಗೋಮಾಂಸ ಸಾಗಿಸುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿ ಯುವಕರಿಗೆ ಕೈಮುಗಿದು ಕೇಳಿಕೊಂಡಿದ್ದಾನೆ. ಆದರೆ ಕೋಪದಲ್ಲಿದ್ದ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಇದನ್ನು ಸ್ಥಳದಲ್ಲಿದ್ದ ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ.
ಗೋಮಾಂಸ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.