ರಾಯಚೂರು: ಕೊರೊನಾ ಲಾಕ್ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ಅಕ್ರಮ ಮರಳು ಸಂಗ್ರಹ, ಸಾಗಣೆ ಜೋರಾಗೆ ನಡೆಯುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯಕ್ಲಾಪೂರ್ ಗ್ರಾಮದ ಬಳಿ 450 ಮೆಟ್ರಿಕ್ ಟನ್ ಅಕ್ರಮ ಮರಳು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಯಾವುದೇ ಪರವಾನಿಗೆ ಇಲ್ಲದೆ ಮತ್ತು ರಾಯಲ್ಟಿ ಇಲ್ಲದೆ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮರಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತ ಮರಳು ಸಂಗ್ರಹಿಸಿಟ್ಟಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಕೃಷ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮುಂದುವರೆದಿದ್ದು, ಜೆಸಿಬಿ ಮೂಲಕ ದಂಧೆಕೋರರು ಮರಳು ಕದಿಯುತ್ತಿದ್ದಾರೆ. ಮರಳನ್ನ ದೂರಸಾಗಿಸಲು ಆಗದೇ ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡುತ್ತಿದ್ದಾರೆ.
ಜಿಲ್ಲಾಡಳಿತ ಮರಳುಗಾರಿಕೆ ಬಂದ್ ಮಾಡಿದ್ದರೂ ಅಕ್ರಮ ಮರಳು ದಂಧೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ದಂಧೆಕೋರರು ನಿರಂತರವಾಗಿ ಮರಳನ್ನ ತೆಗೆದು ಸಂಗ್ರಹಿಸಿಡುತ್ತಿದ್ದಾರೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನದಿ ಪಾತ್ರಗಳಲ್ಲಿ ಓಡಾಡಿ ಅಕ್ರಮ ಮರಳು ಸಂಗ್ರಹ ಅಡ್ಡೆಗಳ ಮೇಲೆ ದಾಳಿಗೆ ಮುಂದಾಗಿದ್ದಾರೆ.