ವಿಜಯಪುರ: ಮೂರು ಜಿಲ್ಲೆಯಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ 12 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 20 ನಾಡ ಪಿಸ್ತೂಲು ಮತ್ತು 49 ಮದ್ದುಗುಂಡುಗಳನ್ನು ವಿಜಯಪುರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜಿನ ಕಿಂಗ್ ಪಿನ್ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಚ್ಚನ್ ಸಿಂಗ್ ಹಾಗೂ ತನ್ಮನ್ ಸಿಂಗ್ ಎಂದು ಹೇಳಿದ್ದಾರೆ. ಹಾಗೂ ಆರೋಪಿಗಳು ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ನಾವು ಅಕ್ರಮವಾಗಿ ಪಿಸ್ತೂಲ್ ಗಳನ್ನು ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
12 ಮಂದಿಯ ವಿರುದ್ಧ 9 ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರ ಕಿಂಗ್ ಪಿನ್ ಆಗಿರುವ ಮಧ್ಯ ಪ್ರದೇಶದ ಇಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದು ಆದಷ್ಟು ಬೇಗ, ಸೆರೆ ಹಿಡಿಯುವುದಾಗಿ ಉತ್ತರ ವಲಯ ಐಜಿಪಿ ಡಾ ಕೆ ರಾಮಚಂದ್ರರಾವ್ ತಿಳಿಸಿದರು.
ಪೊಲೀಸರಿಗೆ ಬಹುಮಾನ: ಅಕ್ರಮ ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಜಿಲ್ಲಾ ಪೊಲೀಸರಿಗೆ 1 ಲಕ್ಷ ಬಹುಮಾನವನ್ನು ಐಜಿಪಿ ಘೋಷಿಸಿದ್ದಾರೆ. ವಿಜಯಪುರದಲ್ಲಿ ಅಕ್ರಮ ಪಿಸ್ತೂಲು ಮಾರಾಟ ದಂಧೆ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.