ಮುಂಬೈ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬಿಸಿಸಿಐ ನೀಡಿದ್ದ ಸಲಹೆಯನ್ನು ಉಲ್ಲಂಘಿಸಿ ರಣಜಿ ಟ್ರೋಫಿಯಲ್ಲಿ ಬೌಲಿಂಗ್ ಮಾಡಿದ್ದಾರೆ.
ಬಿಸಿಸಿಐ ಮೊಹಮ್ಮದ್ ಶಮಿ ಸೇರಿದಂತೆ ಆಸೀಸ್ ಪ್ರವಾಸಕ್ಕೆ ಆಯ್ಕೆಯಾದ ಆಟಗಾರರಿಗೆ ರಣಜಿ ಪಂದ್ಯವೊಂದರ ಇನ್ನಿಂಗ್ಸ್ ಒಂದರಲ್ಲಿ ಗರಿಷ್ಟ 15 ಓವರ್ ಮಾತ್ರ ಬೌಲ್ ಮಾಡಲು ಅವಕಾಶ ನೀಡಿತ್ತು. ಆದರೆ ಬಿಸಿಸಿಐ ಸಲಹೆಯನ್ನು ಉಲ್ಲಂಘಿಸಿರುವ ಶಮಿ 26 ಓವರ್ ಬೌಲಿಂಗ್ ಮಾಡಿದ್ದಾರೆ.
ಬಂಗಾಳ ತಂಡದ ಪರ ಭಾಗವಹಿಸಿದ್ದ ಶಮಿ ಕೇರಳ ವಿರುದ್ಧ ಮೂರು ವಿಕೆಟ್ ಪಡೆದು ಮಿಂಚಿದ್ದರು. ಸದ್ಯ ಶಮಿ ಅವರ ಈ ನಡೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಮಿ, ತಂಡದ ಪರ ಬೌಲ್ ಮಾಡಲು ಹೆಮ್ಮೆ ಆಗುತ್ತದೆ. ಆದರೆ ತರಬೇತಿ ಪಡೆಯುವ ವೇಳೆ ಹೆಚ್ಚಿನ ಬೌಲಿಂಗ್ ಮಾಡದೇ ತಂಡದ ಪರ ಬೌಲ್ ಮಾಡಿದ್ದೆನೆ. ಇದು ಮುಂದಿನ ಆಸೀಸ್ ವಿರುದ್ಧದ ಸರಣಿಗೆ ನನಗೆ ಹೆಚ್ಚಿನ ಸಹಕಾರ ನೀಡಲಿದೆ. ಬಂಗಾಳ ತಂಡದ ಪರ ಬಹುದಿನಗಳ ಬೌಲಿಂಗ್ ಅವಕಾಶ ಮಾಡುವ ಅವಕಾಶ ನನಗೆ ಲಭಿಸಿದೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಸತತವಾಗಿ ಸರಣಿಯಲ್ಲಿ ಭಾಗವಹಿಸುತ್ತಿರುವುದರಿಂದ ಬಿಸಿಸಿಐ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪ್ರತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಸೀಸ್ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿರುವ ಬೌಲರ್ ಗಳಿಗೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಆದರೆ ಆ ಬಳಿಕ ನಿಗದಿತ 15 ಓವರ್ ಬೌಲ್ ಮಾಡುವಂತೆ ಸೂಚಿಸಿತ್ತು. ಬಿಸಿಸಿಐ ಸಲಹೆ ಮೇರೆಗೆ ಹೈದರಾಬಾದ್ ತಂಡ ಇಶಾಂತ್ ಶರ್ಮಾರನ್ನು ಟೂರ್ನಿಯಿಂದ ಕೈಬಿಟ್ಟಿತ್ತು. ಸ್ಪಿನ್ನರ್ ಆಶ್ವಿನ್ ಕೂಡ ರಣಜಿ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಡಿಸೆಂಬರ್ 6 ರಿಂದ ಆರಂಭವಾಗಲಿದ್ದು, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಆಡುವ 11 ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv