ನವದೆಹಲಿ: ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಜೂನ್ 1ರವರೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಧ್ಯಾನಸ್ಥರಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಶುಕ್ರವಾರ ತೀವ್ರವಾಗಿ ಟೀಕಿಸಿದ್ದಾರೆ. ಅವರಿಗೆ ದೇವರಲ್ಲಿ ಅಷ್ಟೊಂದು ನಂಬಿಕೆ ಇದ್ದರೆ ಆ ಧ್ಯಾನವನ್ನು ಮನೆಯಲ್ಲೇ ಮಾಡಬಹುದು ಎಂದು ವಾಗ್ದಾಳಿ ನಡೆಸಿದರು.
ಮೋದಿಯವರು ಕನ್ಯಾಕುಮಾರಿಗೆ (Kanniyakumari) ಹೋಗಿ ನಾಟಕ ಮಾಡುತ್ತಿದ್ದಾರೆ. ಅವರು ಧ್ಯಾನ ಮಾಡುವ ವೇಳೆ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಲ್ಲಿ ಇರಿಸಬೇಕು. ಇದರಿಂದ ಸಾರ್ವಜನಿಕರ ಸಾಕಷ್ಟು ಹಣ ಪೋಲಾಗುತ್ತದೆ. ನಿಮ್ಮ ‘ಶೋ’ ದೇಶಕ್ಕೆ ಹಾನಿ ಮಾಡುತ್ತದೆ. ದೇವರಲ್ಲಿ ನಂಬಿಕೆ ಇದ್ದರೆ ಮನೆಯಲ್ಲೇ ಮಾಡಬಹುದು ಎಂದು ಖರ್ಗೆ ಹೇಳಿದರು.
ಪ್ರಧಾನಿ ಮೋದಿಯವರು ಏನೇ ಹೇಳಿದರೂ ದೇಶದ ಜನತೆ ಅವರ ನಾಯಕತ್ವವನ್ನು ಒಪ್ಪದ ನಿರ್ಧಾರಕ್ಕೆ ಬಂದಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದಂತಹ ವಿಷಯಗಳು ಜನರ ಮನಸ್ಸಿನಲ್ಲಿವೆ. ಬಿಜೆಪಿ ಆಂಧ್ರದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬಹುದು. ಆದರೆ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಉತ್ತರಪ್ರದೇಶದಲ್ಲಿಯೂ ಮೈತ್ರಿಯಿಂದಾಗಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ