ಬಳ್ಳಾರಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನಾವು ಕೆಡುವುದಿಲ್ಲ. ಒಂದು ವೇಳೆ ಬೀಳಿಸುವುದಾದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಹೇಳಿಯೇ ಕೆಡವುತ್ತೇವೆಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲಸವಿಲ್ಲದ ಸರ್ಕಾರ ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದೆ. ಬೆಂಗಳೂರಿನಲ್ಲಿ ಕುಳಿತ ಗುಂಪೊಂದು ನನ್ನ ಮೇಲೆ ಆರೋಪ ಮಾಡುತ್ತಿದೆ. ನಾವು ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ಒಂದು ವೇಳೆ ಬೀಳಿಸುವುದಾದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರಿಗೆ ಹೇಳಿಯೇ ಕೆಡವುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರ ಅವರದ್ದೇ ಇದೆ. ಬೇಕಾದರೇ ಈ ಬಗ್ಗೆ ತನಿಖೆ ಮಾಡಿಸಲಿ. ನಮ್ಮ ತಪ್ಪಿದ್ದರೆ ತನಿಖೆ ಮಾಡಿ ತೋರಿಸಿ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಬರಗಾಲ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ಸಮ್ಮಿಶ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಎಲ್ಲರೂ ಬೆಂಗಳೂರಿನಲ್ಲಿ ಕುಳಿತುಕೊಂಡೇ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಮಾಜಿ ಸಿಎಂ ಹಾಗೂ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಶ್ರೀರಾಮುಲು ಅಷ್ಟೇ ಅಲ್ಲ, ಬಿಜೆಪಿಯ ಹಲವು ನಾಯಕರ ಮೇಲೆ ಬೇಹುಗಾರಿಕೆ ನಡೆದಿದೆ. ಆದರೆ ನಾವು ಆಪರೇಷನ್ ಕಮಲ ಮಾಡುವ ಅಗತ್ಯ ಇಲ್ಲ. ಸೆಲ್ಫ್ ಗೋಲ್ ನಲ್ಲಿ ಸರ್ಕಾರ ಬೀಳುತ್ತದೆ. ಅವರೇ ಆಪರೇಷನ್ ಮಾಡಿ ಸರ್ಕಾರ ಬೀಳಿಸಿಕೊಳ್ಳುತ್ತಾರೆ. ಇದಕ್ಕೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿಯವರ ಹೇಳಿಕೆಯೇ ಸಾಕ್ಷಿ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿದ್ದರೂ, ಸರ್ಕಾರವನ್ನು ರಚಿಸಿಲ್ಲ. ಕೇವಲ 12 ಸ್ಥಾನಗಳ ನೆಪವನ್ನೇ ಇಟ್ಟು ಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದ್ದಾರೆ. ಸಚಿವ ಸಂಪುಟ ಹೆಸರಲ್ಲಿ ಸರ್ಕಾರವನ್ನು ಅವರೇ ಬೀಳಿಸಿಕೊಳ್ಳುತ್ತಾರೆ. ಸರ್ಕಾರ ಬಿದ್ದರೆ, ನಾವು ಸುಮ್ಮನೆ ಕೂರಲ್ಲ. ಜನರ ಹಿತಾಸಕ್ತಿಗಾಗಿ ನಾವು ಸರ್ಕಾರ ಮಾಡಲು ಸಿದ್ಧರಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv