ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಹಾಗೆಯೇ ಬಾಲಿವುಡ್ ನಟ ನಾಸಿರುದ್ದೀನ್ ಶಾ ಕೂಡ ವಿರೋಧಿಸಿದ್ದರು. ನಾಸಿರುದ್ದೀನ್ (Naseeruddin Shah) ಮಾತಿಗೆ ನಟ, ರಾಜಕಾರಣಿ ಮನೋಜ್ ತಿವಾರಿ (Manoj Tiwari) ಎದುರೇಟು ಕೊಟ್ಟಿದ್ದಾರೆ. ನಾಸಿರುದ್ದೀನ್ ಅವರಿಗೆ ಸಿನಿಮಾ ಬಗ್ಗೆ ತಕರಾರುಗಳಿದ್ದರೆ ನೇರವಾಗಿ ಅವರು ಕೋರ್ಟಿಗೆ ಹೋಗಬಹುದು ಎಂದಿದ್ದಾರೆ.
‘ದಿ ಕೇರಳ ಸ್ಟೋರಿ’ ಬಗ್ಗೆ ಕಾಮೆಂಟ್ ಮಾಡಿದ್ದ ನಾಸಿರುದ್ದೀನ್ ಈ ಸಿನಿಮಾವನ್ನು ತಾವು ಯಾವತ್ತೂ ನೋಡುವುದಿಲ್ಲ ಎಂದಿದ್ದರು. ಸಿನಿಮಾ ಗೆದ್ದಿದೆ ಎಂದ ಮಾತ್ರಕ್ಕೆ ಅದು ಒಳ್ಳೆಯ ಗೆಲುವಲ್ಲ. ಅದೊಂದು ಕೆಟ್ಟ ಟ್ರೆಂಡಿನ ಗೆಲುವು ಎಂದು ಪ್ರತಿಕ್ರಿಯಿಸಿದ್ದಾರೆ. ದ್ವೇಷವನ್ನು ಹಂಚುತ್ತಿರುವ ಕುರಿತು ಅವರು ಕಳವಳವನ್ನು ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇನ್ನೆಷ್ಟು ದಿನ ಈ ದ್ವೇಷವನ್ನು ಹಂಚುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?
ಬಾಕ್ಸ್ ಆಫೀಸಿನಲ್ಲಿ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಬಗ್ಗೆ ಈ ಹಿಂದೆ ಕಮಲ್ ಹಾಸನ್ (Kamal Haasan) ಕೂಡ ಮಾತನಾಡಿದ್ದರು. ಅದೊಂದು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದರು. ಸತ್ಯವನ್ನು ಹೇಳದೇ ಅಸತ್ಯವನ್ನೇ ತುಂಬಿರುವಂತಹ ಚಿತ್ರವದು ಎಂದು ಮಾತನಾಡಿದ್ದರು.
ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಕಮಲ್ ಹಾಸನ್, ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದರು.