ಹಾಸನ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಎನಾಯ್ತು ಅಂತ ಪ್ರಶ್ನಿಸಿ, ಎಲ್ಲರು ಸೇರಿ ಎತ್ತಿದವಡೆಗೆ ಹೊಡೆಯಿರಿ ಎಂದು ಜಿಲ್ಲೆಯ ಅರಸೀಕೆರೆ ತಾಲೂಕಿನ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ ಪ್ರಧಾನಿ ಮೋದಿ ವಿರುದ್ಧ ಶಿವಲಿಂಗೇಗೌಡ ಕಾರ್ಯಕರ್ತರನ್ನು ಎತ್ತಿಕಟ್ಟುವ ರೀತಿ ಭಾಷಣ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ನಾನು ನೇರವಾಗಿ ಪ್ರಧಾನಿ ಅವರನ್ನೇ ಪ್ರಶ್ನಿಸುತ್ತಿದ್ದೇನೆ, ನೀವು ಆಡಳಿತಕ್ಕೆ ಬರುವ ಮುನ್ನ ದೇಶದ ರೈತಾಪಿ ವರ್ಗಕ್ಕೆ ಕೊಟ್ಟ ವಾಗ್ದಾನ ಏನು? ರಾಜಕಾರಣಿಗಳು ಸ್ವೀಸ್ ಬ್ಯಾಂಕ್ನಲ್ಲಿಟ್ಟಿರುವ ಕಪ್ಪು ಹಣವನ್ನು ತಂದು ರೈತರ ಅಕೌಂಟ್ಗೆ 10, 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆ ಭರವಸೆ ಏನಾಯ್ತು? ಈ ಬಗ್ಗೆ ಬಿಜೆಪಿಯವರನ್ನು ನೀವು ಕೇಳಬೇಕು. ಅವರನ್ನು ಪ್ರಶ್ನಿಸುವುದನ್ನು ನೀವು ಬೆಳೆಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮೋದಿ ಅವರು ರಾಜ್ಯಕ್ಕೆ ಬಂದರೆ ನೀವೆಲ್ಲ ಕೇಳಬೇಕು ಕಪ್ಪು ಹಣ ಎಲ್ಲಿ? 15 ಲಕ್ಷ ಎಲ್ಲಿ ಎಂದು ಮೋದಿಗೆ ದವಡೆಗೆ ಹೊಡೆಯಿರಿ ಎಂದು ಕಾರ್ಯಕರ್ತರಿಗೆ ಪ್ರಚೋದನೆ ನೀಡಿದ್ದಾರೆ. ಕಪ್ಪು ಹಣ ಹೊರತರುತ್ತೇವೆ ಅಂತ ನೋಟ್ ಬ್ಯಾನ್ ಮಾಡಿದರು. ಅದರಿಂದ ಬಡವರಿಗೆ ಏನು ಲಾಭವಾಯ್ತು? ಚಾಲ್ತಿಯಲ್ಲಿದ್ದ ನೋಟ್ಗಳೆಲ್ಲ ಬ್ಯಾಂಕ್ ಸೇರಿದ್ದು ಬಿಟ್ಟರೆ, ಕಪ್ಪು ಹಣ ಹೊರ ಬರಲಿಲ್ಲ. ಬಡವರಿಗೆ, ರೈತರಿಗೆ ಹಣ ಸಿಗಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.