ಬೆಂಗಳೂರು: ಉಪಸಮರದ ಹೊತ್ತಲ್ಲಿ ಸಿದ್ದರಾಮಯ್ಯರ ಪುತ್ರನ ಸಾವನ್ನ ಕೆದಕಿ ಜನಾರ್ದನ ರೆಡ್ಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ವಿಚಾರ ಸಾಕಷ್ಟು ಟೀಕೆಗೆ ಗುರಿಯಾದ ಬೆನ್ನಲ್ಲೇ ನೋವಾಗಿದ್ರೆ ಕ್ಷಮೆ ಕೇಳುವುದಾಗಿ ಗಣಿಧಣಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ರಾಜ್ಯ ರಾಜ್ಯಕೀಯ ಅಸಹ್ಯಕರ, ಅನಾರೋಗ್ಯಕರ ವಾತಾವರಣಕ್ಕೆ ತಿರುಗಿದೆ. ಕೇವಲ ಮೂರು ತಿಂಗಳು ಇರೋ ಅಧಿಕಾರ ಅವಧಿಗಾಗಿ ನಡೀತಿರೋ ಎಲೆಕ್ಷನ್ ಅಕ್ಷರಶಃ ಡರ್ಟಿ ಪಾಲಿಟಿಕ್ಸ್ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಮಗ ರಾಕೇಶ್ ಸಾವಿಗೆ ಗಣಿಧಣಿ ಜನಾರ್ದನ ರೆಡ್ಡಿ ಕೊಟ್ಟ ಶಾಪ ಕಾರಣನಾ..? ಉಪ ಚುನಾವಣೆ ಹೊತ್ತಲ್ಲಿ ಸಿದ್ದರಾಮಯ್ಯ ಮಗನ ಸಾವನ್ನ ಕೆದಕಿ ರೆಡ್ಡಿ ಸಂಭ್ರಮಿಸ್ತಿದ್ದಾರಾ..? ಪಬ್ಲಿಕ್ ಟಿವಿಗೆ ಜನಾರ್ದನ ರೆಡ್ಡಿ ನೀಡಿರೋ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಹೇಳಿರೋ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಸಿದ್ದರಾಮಯ್ಯ ಮಾಡಿದ್ದಾರೆ. ಶ್ರವಣ ಕುಮಾರ ಕೊಂದಾಗ ಪುತ್ರ ಅಗಲಿಕೆ ನೋವು ಗೊತ್ತಾಗಲಿ ಅಂತ ಹೆತ್ತವರು ಶಾಪ ಕೊಟ್ಟಿದ್ರು. ನನ್ನನ್ನು ನನ್ನ ಮಕ್ಕಳಿಂದ ದೂರ ಮಾಡಿದ ಎಲ್ಲರೂ ಅನುಭವಿಸ್ತಾರೆ. ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ಅದೇ ರೀತಿ ಸಿದ್ದರಾಮಯ್ಯಗೆ ದೇವರು ಸರಿಯಾಗಿ ಬುದ್ಧಿ ಕಲಿಸಿದ್ದಾನೆ ಅಂತ ರಾಕೇಶ್ ಸಾವನ್ನ ಪ್ರಸ್ತಾಪಿಸಿ ಜನಾರ್ದನ ರೆಡ್ಡಿ ಟೀಕಿಸಿದ್ರು.
ರೆಡ್ಡಿ ಹೇಳಿಕೆಗೆ ಟ್ವಿಟ್ಟರ್ನಲ್ಲಿ ತಿರುಗೇಟು ಕೊಟ್ಟಿರುವ ಸಿದ್ದರಾಮಯ್ಯ, “ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ” ಅಂತ ಹೇಳಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರೋ ರೆಡ್ಡಿ, `ಹಿಂದೂ ವಿರೋಧಿ ಮತ್ತು ನಾಸ್ತಿಕರಾಗಿದ್ದ ನೀವು ಇತ್ತೀಚಿನ ದಿನಗಳಲ್ಲಿ ನಂಬುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ದೇವರು ನಿಮಗೆ ಸದ್ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಅಂದಿದ್ದಾರೆ. ಇನ್ನು ಇದೇ ವೇಳೆ ಶಾಸಕ ಸುರೇಶ್ ಕುಮಾರ್, ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಮೊದಲು ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.
ಇತ್ತ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ನಾನು ಆ ರೀತಿಯ ಪದ ಬಳಕೆ ಮಾಡಿಲ್ಲ. ಪುರಾಣವನ್ನು ಉಲ್ಲೇಖಿಸಿದೆ ಅಷ್ಟೆ. ರಾಜ್ಯದ ಜನ ಹಾಗಂದುಕೊಂಡಿದ್ರೆ, ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಇನ್ನು ಸ್ವಪಕ್ಷೀಯರ ವಿರುದ್ಧವೇ ಮಾಜಿ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರುದ್ಧ ಬಣದ ನಾಯಕರ ಮಗನ ಸಾವು ಚುನಾವಣಾ ಸರಕಾಗಿರೋದು ಅಮಾನವೀಯ. ಮಗನನ್ನು ಕಳೆದುಕೊಂಡ ಆ ಸಂಕಟ ಯಾರಿಗೂ ಬರದಿರಲಿ. ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ. ಇತ್ತ ಆಪ್ತಮಿತ್ರ ಜನಾರ್ದನರೆಡ್ಡಿಯನ್ನು ಮಾಜಿ ಸಚಿವ ಶ್ರೀರಾಮುಲು ಸಮರ್ಥಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv