– ಶಿವರಾಜ್ಕುಮಾರ್ ಸಮರ್ಥನೆ ಬಿಟ್ಟು ಕಮಲ್ಗೆ ಬುದ್ದಿ ಹೇಳಲಿ: ಕರವೇ ಅಧ್ಯಕ್ಷ
ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್ಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ (Narayana Gowda) ಎಚ್ಚರಿಕೆ ನೀಡಿದರು.
ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣಗೌಡ, ಆಗಾಗ ಕನ್ನಡಿಗರ ವಿಚಾರದಲ್ಲಿ ಮಾತು ಜಾಸ್ತಿ ಆಗಿದೆ. ಹೊರಗಿಂದ ಬಂದವರು ಕರ್ನಾಟಕ, ಕನ್ನಡದವರ ವಿರುದ್ಧ ಮಾತು ಆಡುತ್ತಿದ್ದಾರೆ. ತಮಿಳುನಾಡು ಆಗಾಗ ಕಾವೇರಿ ವಿಚಾರದಲ್ಲಿ ಸಂಘರ್ಷ ನಡೆಸುತ್ತಿತ್ತು. ಸಂಘರ್ಷಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ದ್ರಾವಿಡ ರಾಜ್ಯದ ಪ್ರಮುಖ ಸಾಹಿತ್ಯ ಜೊತೆ ಮಾತನಾಡಿದ್ದೆ. ಆದರೆ ಇದೇ ಸಂದರ್ಭದಲ್ಲಿ ಕಮಲ್ ಹಾಸನ್ ಈ ರೀತಿ ಹೇಳಿದ್ದಾರೆ. ನಟನ ಬಗ್ಗೆ ಅಭಿಮಾನ ಇತ್ತು. ಆದರೆ ಮೊನ್ನೆ ಆಡಿದ ಮಾತು ಕನ್ನಡಿಗರನ್ನ ಕೆರಳಿಸುವ, ಕನ್ನಡಿಗರನ್ನ ಒಗ್ಗೂಡಿಸುವ, ಪ್ರತಿಭಟಿಸುವ ಸಂದರ್ಭಕ್ಕೆ ಬಂದಿದ್ದಾರೆ. ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಏಕಾಏಕಿ ತಮಿಳುಗರನ್ನ ಓಲೈಸುವ ನಿಟ್ಟಿನಲ್ಲಿ ದುರಹಂಕಾರ, ದುರಾಭಿಮಾನದ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ- ಕಮಲ್ ಹಾಸನ್ ಹೇಳಿಕೆಗೆ ರಚಿತಾ ರಾಮ್ ಕಿಡಿ
ತಮಿಳಿನ ಬಗ್ಗೆ ಅವರು ಏನು ಬೇಕಾದರೂ ಹೇಳಲಿ. ಇನ್ನೊಂದು ಭಾಷೆ ಬಗ್ಗೆ ಮಾತನಾಡುವಾಗ ಕನಿಷ್ಠ ಅರಿವು ಇರಬೇಕಿತ್ತು. ಅದೇ ಸಂದರ್ಭದಲ್ಲಿ ಕನ್ನಡಿಗರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದವರ ಸುಪುತ್ರ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೇ ಹೇಳಬಹುದಾಗಿತ್ತು. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ ಅಂತ ಹೇಳಬಹುದಾಗಿತ್ತು. ವಿಶ್ವದ ಲಿಪಿ ರಾಣಿ ಅಂತ ಕರೆದಿರೋದು ಕನ್ನಡ ಅಂತ ಹೇಳಬಹುದಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಮಾಹಿತಿ ಇಲ್ಲದೆ ಇದ್ದಿರಬಹುದು. ಆದರೆ ಇವತ್ತಿಗೂ ಶಿವರಾಜ್ ಕುಮಾರ್ ಕಮಲ್ ಹಾಸನ್ರನ್ನ ವಹಿಸಿಕೊಳ್ಳುತ್ತಿರೋದನ್ನ ಸಹಿಕೊಳ್ಳೋಕೆ ಆಗಲ್ಲ. ಶಿವರಾಜ್ ಕುಮಾರ್ ಆಗಿದ್ದರೆ ದೊಡ್ಡ ವಿಷಯ ಯಾವುದು? ಏಳೂವರೆ ಕೋಟಿ ಕನ್ನಡಿಗರ ಭಾವನೆ ದೊಡ್ಡದು ಅನ್ನಿಸಲಿಲ್ಲವಾ? ಅಥವಾ ಇದನ್ನ ನೇರವಾಗಿ ಹೇಳುವ ಧೈರ್ಯ ಇಲ್ಲವಾ ಎಂದು ಶಿವರಾಜ್ಕುಮಾರ್ ನಡೆಗೂ ಅಸಮಾಧಾನ ವ್ಯಕ್ತಪಡಿಸಿದರು.
ಶಿವರಾಜ್ ಕುಮಾರ್ ಸಮರ್ಥನೆ ಬಿಟ್ಟು, ಕಮಲ್ ಹಾಸನ್ಗೆ ಹೇಳಿ. ಕ್ಷಮೆಯಾಚಿಸುವಂತೆ ಹೇಳಿ. ಅದನ್ನ ಬಿಟ್ಟು ಕನ್ನಡಿಗರಿಗೆ ಹೇಳೋದು ಸರಿಯಲ್ಲ. ದೊಡ್ಮನೆಗೆ ಇದು ಧಕ್ಕೆಯಾಗುತ್ತೆ. ನೀವೇ ಬುದ್ದಿ ಹೇಳಿ ಕ್ಷಮೆ ಕೇಳಿಸಿ. ಇದನ್ನ ಶಿವರಾಜ್ ಕುಮಾರ್ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕ್ಷಮೆ ಕೇಳಲ್ಲ ಅಂದಾಗ ಬಿಸಿ ಮುಟ್ಟಿಸಬೇಕು- ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ ಆಕ್ರೋಶ
ಯದುವೀರ್ ಒಡೆಯರ್ ರಾಜ್ಯವಿಲ್ಲದ ರಾಜ. ಇವರು ಹೇಳುತ್ತಾರೆ. ಇವರಿಗೆ ಕರ್ನಾಟಕದ ಭಾಷ ಇತಿಹಾಸ ಗೊತ್ತಿಲ್ಲ. ಕನ್ನಡ ಸಂಸ್ಕೃತದಿAದಲೂ ಬಂದಿಲ್ಲ, ತಮಿಳಿನಿಂದಲೂ ಬಂದಿಲ್ಲ ಅನ್ನೋದನ್ನ ಇತಿಹಾಸ ಸಾರಿ ಸಾರಿ ಹೇಳುತ್ತದೆ. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ. ಕೆಲವು ಪದಗಳು ಹೊರ ಭಾಷೆಯಿಂದ ಬಂದಿರಬಹುದಷ್ಟೇ. ಕನ್ನಡದ ಮೂಲ ಯಾವುದೇ ಭಾಷೆ ಅಲ್ಲ ಅನ್ನೋದನ್ನ ಯದುವೀರ್ ಒಡೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.
ರಮ್ಯ ಹೇಳಿಕೆ ಸರಿಯಲ್ಲ. ತಮಿಳಿನ ಯಾವುದೇ ಸಾಮಾನ್ಯ ಕಲಾವಿದರನ್ನ ಮಾತನಾಡಿಸಿ. ಆದರೆ ನಮ್ಮಲ್ಲಿ ಎಲ್ಲರೂ ತಜ್ಞರು ಆಗುತ್ತಾರೆ. ರಮ್ಯ ಉಪದೇಶ ಮಾಡಬೇಡಿ, ಇಲ್ಲಿ ಉಪದೇಶ ತೆಗೆದುಕೊಳ್ಳೋಕೆ ಯಾರೂ ಇಲ್ಲ. ನಮ್ಮ ನೆಲದಲ್ಲಿ ಕನ್ನಡವೇ ದೊಡ್ಡದು. ಮೂರ್ಖತನದ ವಿಚಾರವನ್ನ ಸಮರ್ಥನೆ ಮಾಡಿಕೊಳ್ಳುವಾಗ ಉಪಯೋಗಿಸಬೇಡಿ. ಬುದ್ದಿ ಹೇಳೋ ಆಗಿದ್ದರೆ ಕಮಲ್ ಹಾಸನ್ಗೆ ಹೇಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಮಲ್ ಹಾಸನ್ ಚಾಲ್ತಿಯಲ್ಲಿಲ್ಲದ ನಾಣ್ಯ, ವ್ಯಾಲ್ಯೂ ಇಲ್ಲ: ಶೋಭಾ ಕರಂದ್ಲಾಜೆ ವ್ಯಂಗ್ಯ
ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾಗಬೇಕಾದ್ರೆ ಕ್ಷಮೆಯಾಚಿಸಲೇಬೇಕು. ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ಬಿಡಲ್ಲ. ನಮ್ಮ ರಾಜ್ಯದ ನಟರು ತಮಿಳು ಕನ್ನಡಿದಿಂದ ಹುಟ್ಟಿದೆ ಅಂದಿದ್ದರೆ ತಮಿಳುನಾಡು ಹತ್ತಿ ಉರಿಯುತ್ತಿತ್ತು. ನಾವು ಎಲ್ಲವನ್ನ ಸಹಿಸಿಕೊಳ್ಳುವವರು. ಹಾಗಾಗಿ ತಾಳ್ಮೆಯಿಂದ ಇದ್ದೇವೆ. ಶಿವರಾಜ್ ಕುಮಾರ್ ಈಗಲೂ ಕಮಲ್ ಹಾಸನ್ ಬುದ್ದಿ ಹೇಳಿ. ಕನ್ನಡಿಗರಿಗೆ ಹೇಳೋದನ್ನ ಬಿಟ್ಟು ಬಿಡಿ. ಎಲ್ಲಾ ಕನ್ನಡದ ನಟ-ನಟಿಯರು ಕಮಲ್ ಹಾಸನ್ ಹೇಳಿಕೆಯನ್ನ ಖಂಡಿಸಿಬೇಕು. ಇಲ್ಲದಿದ್ದರೆ ನಿಮ್ಮನ್ನ ರಣಹೇಡಿಗಳು ಅಂತ ತೀರ್ಮಾನ ಮಾಡಿ, ಕನ್ನಡಿಗರು ಪಾಠ ಕಲಿಸುತ್ತಾರೆ. ಶಿವರಾಜ್ ಕುಮಾರ್ರನ್ನ ಭೇಟಿ ಮಾಡುತ್ತೇವೆ. ಒಂದಷ್ಟು ಕನ್ನಡದ ಇತಿಹಾಸದ ಪುಸ್ತಕಗಳನ್ನ ತೆಗೆದುಕೊಂಡು ಹೋಗಿ ಇತಿಹಾಸದ ಬಗ್ಗೆ ಹೇಳುತ್ತೇವೆ ಎಂದು ತಿರುಗೇಟು ನೀಡಿದರು.