ಬಳ್ಳಾರಿ: ಬಿಜೆಪಿ ನಾಯಕರು ಒಂದೆಡೆ ಟೆಂಪಲ್ ರನ್ ಮಾಡತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೇವಾಲಯದೊಳಗೆ ಪ್ರವೇಶ ಮಾಡೋದು ಅಕ್ರಮ ಅನ್ನೋ ಹೇಳಿಕೆ ನೀಡಿದ್ದಾರೆ.
ಸಂಡೂರಿನಲ್ಲಿಂದು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸ್ಮೃತಿ ಇರಾನಿಯವರನ್ನು ಪಕ್ಷದ ಮುಖಂಡರು ಸಂಡೂರಿನ ವಿರಕ್ತ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವಾಲಯದೊಳಗೆ ಪ್ರವೇಶ ಮಾಡಲು ನಿರಾಕರಿಸಿದ ಸೃತಿ ಇರಾನಿ, ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ನಡೆಸಲು ಮುಂದಾದ್ರು.
ಕಾರ್ಯಕರ್ತರ ಮಠದೊಳಗೆ ಆಗಮಿಸುವಂತೆ ಮನವಿ ಮಾಡಿದಾಗ ದೇವಾಲಯದೊಳಗೆ ಪ್ರವೇಶ ಮಾಡಿದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ. ಹೀಗಾಗಿ ನಾನು ಬರಲ್ಲವೆಂದು ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.
ಬಳಿಕ ಮಾತನಾಡಿದ ಸ್ಮೃತಿ ಇರಾನಿ, ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ. ಹೀಗಾಗಿ ಎಲ್ಲಾ ಮತದಾರರು ಬಿಜೆಪಿಗೆ ಮತ ಹಾಕಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಅಭ್ಯರ್ಥಿ ರಾಘವೇಂದ್ರ ಸಹ ಈ ಭಾರೀ ಸಂಡೂರಿನಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಪ್ರಧಾನಿ ಮೋದಿ ಬಳ್ಳಾರಿ ಪ್ರವಾಸ ಮಾಡಿದ ನಂತರ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.