ಮಂಡ್ಯ: ನಾನೇನಾದರೂ ಕೆಲಸ ಮಾಡಲಿಲ್ಲ ಅಂದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ.
ಇಂದು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ತೆರೆಳಿದ್ದರು. ಈ ವೇಳೆ ಅವರ ಬಳಿ ಮಹಿಳೆಯೊಬ್ಬರು, ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಬಂದು ಭರವಸೆ ನೀಡಿ ಹೋಗುತ್ತಾರೆ. ಆದ್ರೆ ನಂತರ ನಮ್ಮತ್ತ ತಿರುಗಿ ಕೂಡ ನೋಡಲ್ಲ. ನಮಗೆ ಸರಿಯಾದ ಮನೆ ವ್ಯವಸ್ಥೆಯಿಲ್ಲ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ನಿಮ್ಮ ಕೆಲಸ ಆಗುತ್ತದೆ. ಒಂದು ವೇಳೆ ನೀವು ಹೇಳಿದ ಕೆಲಸವನ್ನು ನಾನು ಮಾಡಿಲ್ಲ ಅಂದ್ರೆ ಅದನ್ನು ಪ್ರಶ್ನಿಸುವ ಹಕ್ಕು ನಿಮಗಿದೆ. ಹಾಗೆಯೆ ಚುನಾವಣೆಯಲ್ಲಿ ಮತ ಹಾಕಿ ಜನಪರ ಕೆಲಸ ಮಾಡಲು ನನಗೊಂದು ಅವಕಾಶ ಕೊಡಿ ಅಂತ ಮನವಿ ಮಾಡಿಕೊಂಡರು.
ಇದಕ್ಕೂ ಮೊದಲು ಹೆಮ್ಮನಹಳ್ಳಿ ಗ್ರಾಮದಿಂದ ನಿಖಿಲ್ ಪ್ರಚಾರ ಆರಂಭಿಸಿದಾಗ ಆತಗೂರು ಗ್ರಾಮದಲ್ಲಿ ಪದ್ಮಮ್ಮ, ತಮ್ಮ ಮಕ್ಕಳಿಗೆ ಕೆಲಸವಿಲ್ಲ ಎಂದು ಮಹಿಳೆ ಕಣ್ಣೀರು ಹಾಕಿದ್ದರು. ಆಗ ನಿಖಿಲ್, ಪದ್ಮಮ್ಮ ಅವರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ನಿಮ್ಮ ಮಗನಿದ್ದಂತೆ, ನಿಮ್ಮ ಮಕ್ಕಳಿಗೂ ಅಣ್ಣ-ತಮ್ಮನಂತೆ ನಾನಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಿಸಿ ಮಾಡುತ್ತೇನೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ರು.
ಲೋಕಸಭಾ ಸದಸ್ಯನಾಗಿ ಮೆರೆಸುವುದಕ್ಕೆ ನನ್ನ ತಂದೆ ಮಾಡುತ್ತಿಲ್ಲ. ನನ್ನ ಸ್ವಾರ್ಥಕ್ಕೆ ನಾನು ಬರುತ್ತಿಲ್ಲ. ನನಗೆ ಒಂದು ಅವಕಾಶ ಕೊಡಿ. ನೀವು ಮತದಾನ ಪ್ರಭುಗಳು. ಏನೂ ಬೇಕಾದರೂ ಕೇಳುವ ಹಕ್ಕು ನಿಮಗಿದೆ. ನಾನು ನಿಮ್ಮ ಮನೆ ಮಗ. ಕುಮಾರಸ್ವಾಮಿ ಹಾಗೂ ದೇವೇಗೌಡರು ನಿಮ್ಮ ಪರವಾಗಿ ನಿಂತಿದ್ದಾರಾ ಅಥವಾ ಬೇರೆ ವ್ಯಾಮೋಹಕ್ಕೆ ಒಳಗಾಗಿದ್ದಾರಾಂತ ನೀವೇ ಯೋಚಿಸಿ ಎಂದು ಹೇಳಿದ್ದಾರೆ.