ಕೋಲಾರ : ಜಿಲ್ಲೆಯ ಬಹು ನಿರೀಕ್ಷೆಯ ಯರಗೋಳ್ ಜಲಾಶಯಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರ ಬಾಗಿನ ಅರ್ಪಿಸಿದರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಗ್ರಾಮದ ಬಳಿ ಇರುವ ಜಲಾಶಯ ಇದಾಗಿದ್ದು, ಕಳೆದೊಂದು ವಾರದಿಂದ ಸುರಿದ ಮಳೆಗೆ ಜಲಾಶಯ ಭರ್ತಿಯಾಗಿ ಹರಿಯುತ್ತಿದೆ.
ಕಳೆದ ಮೂರು ದಿನಗಳಿಂದ ಭರ್ತಿಯಾಗಿ ಹರಿಯುತ್ತಿರುವ ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿದ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಶ್ರೀನಿವಾಸಪುರ ಶಾಸಕ ಕೆ.ಅರ್. ರಮೇಶ್ ಕುಮಾರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಪರಿಷತ್ ಸದಸ್ಯರಾದ ನಜೀರ್ಅಹ್ಮದ್, ಅನಿಲ್ ಕುಮಾರ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿ ಬಾಗಿನ ಅರ್ಪಿಸಿದರು.
ಡ್ಯಾಂನಲ್ಲಿ ನೀರು ಶೇಖರಣೆಯಾದರೂ ಸಾರ್ವಜನಿಕರ ಬಳಕೆಗೆ ಈ ಯೋಜನೆಯ ಲಾಭ ಸಿಗುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮೊದಲು ಮಾತುಕತೆ, ನಿಶ್ಚಿತಾರ್ಥ, ಮದುವೆ ಎಲ್ಲವು ಸರಿಯಾದರೆ 9 ತಿಂಗಳಲ್ಲಿ ಮಕ್ಕಳಾಗುತ್ತದೆ ಎಂದು ತಮ್ಮದೇ ದಾಟಿಯಲ್ಲಿ ಉತ್ತರಿಸಿದರು. ಇದನ್ನೂ ಓದಿ: ಫಸ್ಟ್ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ
ಈ ವೇಳೆ ಯೋಜನೆಗೆ ಚಾಲನೆ ಸಿಕ್ಕಿ 14 ವರ್ಷ ಆಗಿದೆ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಒಮ್ಮೊಮ್ಮೆ ನರಗಳ ದೌರ್ಬಲ್ಯ ಇದ್ದಾಗ, ಮಕ್ಕಳಾಗುವುದು ವಿಳಂಬವಾಗುತ್ತೆ ಎಂದು ಮಾಧ್ಯಮಗಳ ವಿರುದ್ಧ ಇದ್ದ ಬೇಸರವನ್ನು ಪ್ರದರ್ಶನ ಮಾಡಿದರು.



