ಬೆಂಗಳೂರು: ನನ್ನ ಕಣ್ಣು ಆಪರೇಷನ್ ಆಗಿದೆ. ವೈದ್ಯರು ಧೂಳಿನಿಂದ 15 ದಿನ ದೂರ ಇರಿ ಎಂದಿದ್ದಾರೆ. ಹೀಗಾಗಿ ವೈದ್ಯರು ಹೋಗಿ ಅಂದ್ರೆ ಎರಡು ದಿನ ನನ್ನ ಕ್ಷೇತ್ರಕ್ಕೆ ಹೋಗುತ್ತೇನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ನಾನು ಕ್ಷೇತ್ರಕ್ಕೆ ಹೋಗಿಲ್ಲ ಎಂದು ಚರ್ಚೆಯಾಗುತ್ತಿದೆ. ಇಂತಹ ಸಮಯದಲ್ಲಿ ನಾನು ಯಾವತ್ತೂ ಜನರ ಜೊತೆ ಇರುವವನೇ. ಆದರೆ ಕಣ್ಣಿನ ಆಪರೇಷನ್ ನಿಂದ ಹೋಗಿಲ್ಲ ಎಂದರು.
ನಾಳೆ ವೈದ್ಯರ ಭೇಟಿಯಾಗಿ ಅವರು ಹೋಗಿ ಅಂದರೆ ಎರಡು ದಿನ ನನ್ನ ಕ್ಷೇತ್ರಕ್ಕೆ ಹೋಗುತ್ತೇನೆ. ಬೇರೆ ಸ್ಥಳಗಳಿಗೂ ಹೋಗುತ್ತೇನೆ. ವರುಣಾ ಕ್ಷೇತ್ರದಲ್ಲೂ ಸಮಸ್ಯೆ ಆಗಿದೆ. ನಮ್ಮ ಹುಡುಗರನ್ನು ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.
ಜನ ಮನೆ-ಮಠ ಕಳೆದುಕೊಂಡಿದಿದ್ದಾರೆ. ಧಾರಾಳವಾಗಿ ಸಹಾಯ ಹಸ್ತ ಚಾಚಬೇಕು. ಜನರು, ಉದ್ಯಮಿಗಳು ಜನರ ಕಷ್ಟಕ್ಕೆ ಸಹಾಯ ಮಾಡಿ. ದೇವರಲ್ಲಿ ಪ್ರವಾಹ ಕಡಿಮೆ ಆಗಲು ಪ್ರಾರ್ಥನೆ ಮಾಡುತ್ತೇನೆ. ಕಾಂಗ್ರೆಸ್ ಶಾಸಕರ ಒಂದು ತಿಂಗಳ ಸಂಬಳ ಪರಿಹಾರ ಕಾರ್ಯಕ್ಕೆ ನೀಡುತ್ತಿದ್ದೇವೆ ಎಂದು ನುಡಿದರು.
ವರ್ಗಾವಣೆ ಬಿಟ್ಟು ಈ ಸರ್ಕಾರ ಏನೂ ಕೆಲಸ ಮಾಡುತ್ತಿಲ್ಲ. ಯಡಿಯೂರಪ್ಪ ಒನ್ ಮ್ಯಾನ್ ಶೋ ಕೇವಲ ವರ್ಗಾವಣೆ ಮಾತ್ರ ಮಾಡುತ್ತಿರೋದು. ಅವರದ್ದೇ ಸರ್ಕಾರ ಇದ್ದು ಇನ್ನೂ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಇದನ್ನ ಜನ ವಿರೋಧ ಸರ್ಕಾರ ಅಂತ ಕರೆಯಬಹುದು. ಸರ್ಕಾರ ಇದೆ ಅಂತ ನನಗೆ ಅನ್ನಿಸುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಎರಡೂ ಇಲ್ಲದಂತೆ ವರ್ತನೆ ಮಾಡುತ್ತಿವೆ. ಯಾವುದೇ ರಾಜ್ಯದಲ್ಲಿ ಪ್ರವಾಹ ಆದರೆ ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂದರು.
4 ದಿನದ ಹಿಂದೆ ನಾನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರು ಕೆಲವು ದಿನಗಳ ಕಡ್ಡಾಯ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ, ಅಲ್ಲಿ ಹೋಗಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಮನಸ್ಸು ತುಡಿಯುತ್ತಿದ್ದರೂ, ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ. pic.twitter.com/jgoIjXFv29
— Siddaramaiah (@siddaramaiah) August 9, 2019
ನಮ್ಮ ಎಲ್ಲಾ ಶಾಸಕರಿಗೆ ಅವರ ಕ್ಷೇತ್ರಗಳು ಬಿಟ್ಟು ಬರದೇ ಇರಲು ಸೂಚನೆ ನೀಡಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸದೇ ಹೋದರೆ ಜನ ವಿರೋಧಿಗಳು ಆಗುತ್ತಾರೆ. ಜನರ ಕಷ್ಟ ಕೇಳಲು ಸರ್ಕಾರ ಇರೋದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.