ರಾಮನಗರ: ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ ಎಂದು ಬಿಜೆಪಿಯ ಕಟ್ಟಾ ಸುಬ್ರಮಣ್ಯಂ ನಾಯ್ಡು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಮಾಗಡಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವೊಂದರಲ್ಲಿ ಕಟ್ಟಾ ಸುಬ್ರಮಣ್ಯಂ ನಾಯ್ಡು ಅವರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕೆಲವರಿಗೆ ಅಜೀರ್ಣ, ಆಸೂಹೆ, ಅಸಂತೃಪ್ತಿ ಕೂಡ ಬಂದಿದೆ. ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಅಲ್ಲಿನ ಅಸಂತೃಪ್ತಿಯಿಂದ ಪಕ್ಷ ಬಿಟ್ಟು ಹೊರ ಬಂದಿದ್ದಾರೆ. ಈ ಹಿಂದೆ ಸಮಾಧಾನವಾಗಿದ್ದ ಆ ಶಾಸಕರುಗಳ ಮೇಲೆ ಯಾವ ಟೀಕೆಯೂ ಇರಲಿಲ್ಲ. ಆದ್ರೆ ಪಕ್ಷ ಬಿಟ್ಟ ಮೇಲೆ ಟೀಕೆ ವ್ಯಕ್ತವಾಗುತ್ತಿದೆ ಎಂದರು. ಬಳಿಕ ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ ಎಂದು ಟಾಂಗ್ ಕೊಟ್ಟರು.
ಪಕ್ಷ ಶಾಸಕರನ್ನು ನಡೆಸಿಕೊಂಡಿರುವ ನಡವಳಿಕೆಯಿಂದ ಅವರಿಗೆ ಅಸಮಧಾನವಾಗಿದೆ. ಹೀಗಾಗಿ ಪಕ್ಷ ಬಿಟ್ಟಿದ್ದಾರೆ. ಆದರೆ ಈಗ ಅಂತಹ ಶಾಸಕರನ್ನು ದುಷ್ಟರು, ಭ್ರಷ್ಟರು, ಭೂತಗಳು ಎಂದು ಸಮಾಜದಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಬಳಿ ಇದ್ದಾಗ ಶಾಸಕರು ಸರಿಯಿದ್ದರು. ಈಗ ಅವರು ಭ್ರಷ್ಟರಾಗಿದ್ದಾರಾ ಎಂದು ಪ್ರಶ್ನಿಸಿ ಅನರ್ಹಗೊಂಡ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಅತೃಪ್ತ ಶಾಸಕರು ನಿಮ್ಮನ್ನು ತಿಂದುಬಿಡುತ್ತಾರೆ ಎಂಬ ಕೈ-ದಳ ನಾಯಕರ ಮಾತಿಗೆ ಪ್ರತಿಕ್ರಿಯಿಸಿ, ನಾವೇನು ಬಿರಿಯಾನಿನಾ ತಿಂದು ಬಿಡಲು ಎಂದು ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸುಳ್ಳಿನ ಸೌಧ ಕಟ್ಟುತ್ತಿದ್ದಾರೆ. ಅವರ ಈ ಬುದ್ಧಿಯಿಂದಲೇ ಇಂದು ಕಾಂಗ್ರೆಸ್ ಸರ್ವನಾಶವಾಗಿದೆ. ಅತೃಪ್ತ ಶಾಸಕರು ನಮ್ಮ ಬಳಿ ಸಂಪರ್ಕಿಸಿದ್ದರು ಎಂಬುದು ಸುಳ್ಳು ಸುದ್ದಿ ಎಂದು ತಿಳಿಸಿದರು. ಹಾಗೆಯೇ ಅತೃಪ್ತ ಶಾಸಕರನ್ನು ಅನರ್ಹ ಮಾಡಲು ಸ್ಪೀಕರ್ ಗೆ ಹಕ್ಕಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.