ಉಡುಪಿ: ಚುನಾವಣೆ ಬಂದರೆ ರಾಹುಲ್ ಗಾಂಧಿ ದೇವಸ್ಥಾನ ಸುತ್ತುತ್ತಾರೆ. ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಹಿಂಬಾಲಿಸ್ತಾರೆ. ಆರು ಬಾರಿ ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಬಾರದ ಸಿಎಂ ಚುನಾವಣೆ ಸಂದರ್ಭ ಕೃಷ್ಣಮಠಕ್ಕೆ ಬಂದರೆ ಜನ ಬಡಿಗೆ ತೆಗೆದುಕೊಳ್ಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಜನಸುರಕ್ಷಾ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಇಳಿವಯಸ್ಸಿನ ಪೇಜಾವರ ಸ್ವಾಮೀಜಿ ಹಲವು ಬಾರಿ ಆಮಂತ್ರಣ ಕೊಟ್ಟರೂ ಸಿಎಂ ಮಠಕ್ಕೆ ಬರಲಿಲ್ಲ. ಕನಕನಿಗೆ ಒಲಿದ ಕೃಷ್ಣನ ದರ್ಶನ ಮಾಡದೆ ಹಠಕ್ಕೆ ಬಿದ್ದರು. ರಾಹುಲ್ ಗಾಂಧಿ ಬಂದಾಗ ಕೃಷ್ಣ ಮಠಕ್ಕೆ ಬರುತ್ತೀರಾ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದರು.
ಓಟ್ ನ ಸಂದರ್ಭದಲ್ಲಿ ಉಡುಪಿ ಮಠಕ್ಕೆ ಬಂದರೆ ಇಲ್ಲಿನ ಜನ ಬಡಿಗೆ ತಗೊಳ್ಳಿ ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದ್ರು. ಇವರು ಚುನಾವಣೆ ಬಂದಾಗ ಬರುವುದು ದೇವರ ಮೇಲಿನ ಭಕ್ತಿಯಿಂದಲ್ಲ, ಕೃಷ್ಣಮಠವನ್ನು ವಶಪಡಿಸುವ ಷಡ್ಯಂತ್ರದಿಂದ. ಇಷ್ಟೆಲ್ಲಾ ಮಾಡಿದ ನಿಮ್ಮನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುತ್ತಾರೆ. ಶುದ್ಧವಾಗಿರಬೇಕು ಎಂಬ ನಂಬಿಕೆಗೆ ಇದರಿಂದ ಧಕ್ಕೆಯಾಗಿದೆ. ಇದರಿಂದ ಜನರ ಧಾರ್ಮಿಕ ಭಾವನೆಗೆ ಹಿನ್ನಡೆಯಾಗಿದೆ. ಸಿಎಂ ಗೋಮಾಂಸ ತಿಂತೇನೆ ಅಂತಾರೆ. ಈಗ ಯಾಕೆ ದೇವಸ್ಥಾನಕ್ಕೆ ಹೋಗುತ್ತೀರಾ ಎಂದು ಸಿಎಂಗೆ ಪ್ರಶ್ನೆ ಕೇಳಿ ಗರಂ ಆದ್ರು.