ಚಂಡೀಗಢ: ಸರ್ಕಾರದ ವರ್ಗಾವಣೆಯಿಂದ ಬೇಸರಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ, ಭೇಟಿಗೆ ಅವಕಾಶ ಕೋರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿಗಳ ಭೇಟಿಗೆ ಅವಕಾಶ ಕೊಡಿಸುವಂತೆ ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ಪತ್ರ ಬರೆದಿದ್ದಾರೆ. ಪ್ರಾಮಾಣಿಕರಿಗೆ ಇಲ್ಲಿ ಮಾನ್ಯತೆ ಇಲ್ಲ. ವಿಧೇಯ ಮತ್ತು ಭಷ್ಟರು ಸಕ್ರಿಯ ಸೇವೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಪ್ರಾಮಾಣಿಕರಿಗೆ ಸಣ್ಣ, ಅತ್ಯಲ್ಪ ಹುದ್ದೆಗಳು ಮಾತ್ರ ಸಿಗುತ್ತಿವೆ ಅಂತ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರಾಮಾಣಿಕತೆಗೆ ಟ್ರಾನ್ಸಫರ್ ಗಿಫ್ಟ್: ಹರ್ಯಾಣದ ಹಿರಿಯ ಐಎಎಸ್ ಅಧಿಕಾರಿ ಆಗಿರುವ ಅಶೋಕ್ ಖೆಮ್ಕಾ ಸೇವೆಗೆ ಸೇರಿದ 30 ವರ್ಷಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 53 ಬಾರಿ ವರ್ಗಾವಣೆಯಾಗಿದ್ದಾರೆ. ಹರ್ಯಾಣ ಸರ್ಕಾರದಲ್ಲಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಖೆಮ್ಕಾ ಅವರಿಗೆ ಪ್ರಾಮಾಣಿಕತೆಯೇ ಮುಳುವಾಗಿದೆ. 1991ರಲ್ಲಿ ಭಾರತೀಯ ಸೇವೆಗೆ ಸೇರಿದ ಅಶೋಕ್ ಖೆಮ್ಕಾ ಪ್ರಾಮಾಣಿಕವಾಗಿ ಮಾಡಿದ ಕೆಲಸಕ್ಕೆ ವರ್ಗಾವಣೆಯೇ ದೊಡ್ಡ ಗಿಫ್ಟ್ ಆಗಿ ಪಡೆದಿದ್ದಾರೆ.
ಖುದ್ದು ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ಕೇಳಿರುವ ಅಶೋಕ್ ಖೆಮ್ಕಾ, ಪ್ರಧಾನಿ ಅವರ ಬಳಿಯೇ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಲು ಸಿದ್ಧರಾಗಿದ್ದಾರೆ. ಪ್ರಧಾನಿ ಮೋದಿ ಅವರು ಅಶೋಕ್ ಖೆಮ್ಕಾರ ಭೇಟಿಗೆ ಅವಕಾಶ ಕೊಡ್ತಾರಾ? ಪ್ರಾಮಾಣಿಕ ಅಧಿಕಾರಿಗಳ ಬೆಂಬಲಕ್ಕೆ ಮೋದಿ ಕ್ರಮ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕು.