ಹಾವೇರಿ: ಕಳೆದ ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಿಲ್ಲ. ಈ ಬಾರಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ನಾಲ್ಕನೇ ಬಾರಿಗೆ ಸಿಎಂ ಆಗ್ತಿರೋದು ಸಂತಸ ತಂದಿದೆ. ಕಳೆದ ಬಾರಿ ಸಚಿವನಾಗುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ವಿಶ್ವಾಸ ಮತಯಾಚನೆ ನಂತರ ಸಚಿವರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ರಾಷ್ಟ್ರೀಯ ನಾಯಕರ ಸೂಚನೆಯಂತೆ ಯಡಿಯೂರಪ್ಪನವರ ಮಂತ್ರಿಮಂಡಲ ರಚನೆಯಾಗಲಿದೆ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯದನಾದ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಕಳೆದ ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ. ನನಗೆ ಸಚಿವಸ್ಥಾನ ನೀಡುವಂತೆ ಸಮುದಾಯದ ಅನೇಕರು ಈಗಾಗಲೇ ಒತ್ತಡ ತಂದಿದ್ದಾರೆ ಎಂದು ತಿಳಿಸಿದರು.
ವಿಶ್ವಾಸ ಮತಯಾಚನೆ ನಂತರ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಚಿವಸ್ಥಾನ ನೀಡುವಂತೆ ಕೇಳುತ್ತೇನೆ. ಆದರೆ ಸಚಿವಸ್ಥಾನ ಸಿಕ್ಕರು, ಸಿಗದಿದ್ದರೂ ಬಿಎಸ್ವೈ ಜೊತೆಗಿರುತ್ತೇನೆ. ಜಿಲ್ಲೆಯಲ್ಲಿ ಶಾಸಕರಾದ ಬಿ.ಸಿ.ಪಾಟೀಲ, ಆರ್.ಶಂಕರ, ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಸಿ.ಎಂ.ಉದಾಸಿ ಇದ್ದಾರೆ. ಹೆಚ್ಚು ಪ್ರಭಾವಿ ಶಾಸಕರಿರುವುದರಿಂದ ಸಚಿವಸ್ಥಾನ ಹಂಚಿಕೆ ಬಹಳ ಜಟಿಲವಾಗಿದೆ. ಆದರೂ ಸಮುದಾಯಕ್ಕೆ ಮಂತ್ರಿಸ್ಥಾನ ಕೊಡಿ ಎಂಬ ಬೇಡಿಕೆಯನ್ನಷ್ಟೇ ಇಡುತ್ತೇನೆ ಎಂದರು.