ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ದಿನ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಗೈರು ಹಾಜರಿ ಬಗ್ಗೆ ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ ಸೌಮ್ಯ ರೆಡ್ಡಿ ಅವರು, ಪಕ್ಷದಿಂದ ಸದನಕ್ಕೆ ಹಾಜರು ಆಗವಂತೆ ವಿಪ್ ಜಾರಿ ಮಾಡಿದ್ದಾರೆ. ಆದರೆ ಈ ಬಗ್ಗೆ ನಾನು ಪಕ್ಷದ ಮುಖಂಡರಿಗೆ ಮಾಹಿತಿ ನೀಡಿ ಗೈರಾಗುವ ಬಗ್ಗೆ ಪೂರ್ವಾನುಮತಿ ಪಡೆದಿದ್ದೇನೆ ಎಂದು ತಿಳಿಸಿದರು.
ಸದನದ ಮೊದಲ ದಿನವಾಗಿದ್ದು, ನನಗೆ ಅನಾರೋಗ್ಯದ ಸಮಸ್ಯೆ ಇದೆ. ಒಂದು ದಿನ ಬರಲಿಲ್ಲ ಎಂದರೆ ಅಸಮಾಧಾನ ಎಂದು ಪರಿಗಣಿಸಬಾರದು, ಆದರೆ ಪಕ್ಷದ ವಲಯದಲ್ಲಿ ಈ ಬಗ್ಗೆ ನಾಯಕರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದೇನೆ. ನಾಳೆ ಸದನಕ್ಕೆ ಆಗಮಿಸುತ್ತೇನೆ ಎಂದರು. ಇದೇ ವೇಳೆ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಮೊದಲು ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಆದರೆ ಒಂದು ಕುಟುಂಬ ಎಂದರೆ ಇದೆಲ್ಲ ಸಾಮಾನ್ಯ. ಸದ್ಯ ಅಂತಹ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ಒಟ್ಟಾಗಿ ನಡೆಯುತ್ತೇವೆ ಎಂದರು.
ಇತ್ತ ಸದನಕ್ಕೆ ಎರಡು ಗಂಟೆ ತಡವಾಗಿ ಆಗಮಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಪಕ್ಷದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಸದನಕ್ಕೆ ಬರುವುದು ಸ್ವಲ್ಪ ತಡ ಆಯಿತು ಅಷ್ಟೇ. ಆದರೆ ಬಿಜೆಪಿ ಶಾಸಕರು ಸದನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ್ದು ಸರಿ ಅಲ್ಲ. ಅವರ ಭಾಷಣ ಮುಗಿದ ಮೇಲೆ ಮಾತನಾಡಲು ವಿಪಕ್ಷಕ್ಕೆ ಅವಕಾಶ ಇರುತ್ತದೆ. ನಾವು ವಿರೋಧ ಪಕ್ಷದಲ್ಲಿ ಇದ್ದ ವೇಳೆ ಇಂತಹ ವರ್ತನೆ ತೋರಿರಲಿಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv