ಬೆಂಗಳೂರು: ಕಾಂಗ್ರೆಸ್ (Congress) ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು (HD Devegowda) ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ದೇವೇಗೌಡರು ಕಾಂಗ್ರೆಸ್ ಜತೆ ಮೈತ್ರಿ ಮುರಿದುಕೊಂಡ ಬಗ್ಗೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿಕೆ ನೀಡಿದ್ದಕ್ಕೆ ಪತ್ರದ ಮೂಲಕ ಅವರ ದಾಟಿಯಲ್ಲೇ ಟಾಂಗ್ ಕೊಟ್ಟಿದ್ದಾರೆ.
ಪತ್ರದಲ್ಲಿ ಏನಿದೆ?
ನನ್ನ ಆತ್ಮೀಯ ಮತ್ತು ದೀರ್ಘಕಾಲದ ಸ್ನೇಹಿತರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಂಸತ್ತಿನಲ್ಲಿ ನನ್ನ ಬಗ್ಗೆ ಒಂದು ಲಘು ಮಾತುಗಳನ್ನಾಡಿದ್ದಾರೆ. ನಾನು ಮೊದಲು ಅವರೊಂದಿಗೆ (ಕಾಂಗ್ರೆಸ್) ʻಪ್ರೀತಿಯಲ್ಲಿದ್ದೆʼ, ಆದರೆ ಅಂತಿಮವಾಗಿ ಮೋದಿ ಜೀ (ಬಿಜೆಪಿ) ಅವರನ್ನು ʻಮದುವೆಯಾದೆʼ ಎಂದು ಅವರು ಹೇಳಿದ್ದಾರೆ.
ನಾನು ಯಾಕೆ ಹಾಗೆ ಮಾಡಿದೆ ಎಂಬ ಕಾರಣ ತಮಗೆ ತಿಳಿಯುತ್ತಿಲ್ಲ ಎಂದೂ ಅವರು ಹೇಳಿದ್ದಾರೆ. ನಾನು ನಾಳೆಯ ಯುಗಾದಿ ಆಚರಣೆಗಾಗಿ ಬೆಂಗಳೂರಿಗೆ ಬರಬೇಕಿದ್ದರಿಂದ ಖರ್ಗೆಯವರು ಮಾತನಾಡಿದ ಸಮಯದಲ್ಲಿ ನಾನು ಸದನದಲ್ಲಿ ಇರಲಿಲ್ಲ. ನನ್ನ ಸ್ನೇಹಿತರಿಗೆ ಅದೇ ಮದುವೆಯ ಭಾಷೆಯಲ್ಲೇ ಉತ್ತರಿಸುವುದಾದರೆ – ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ, ಆದರೆ ಅದು ಒಂದು ಹಿಂಸಾತ್ಮಕ ಸಂಬಂಧವಾಗಿದ್ದರಿಂದ ನಾನು ಅವರಿಗೆ ʻವಿಚ್ಛೇದನʼ ನೀಡಬೇಕಾಯಿತು ಎಂದು ಹೇಳಲು ಬಯಸುತ್ತೇನೆ. ಇದನ್ನೂ ಓದಿ: ಕನ್ನಡಿಗ ಪಡೆದಿದ್ದ ರ್ಯಾಂಕ್ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್
My dear friend Shri. @kharge made a humorous comment in parliament today on my “love” for @INCIndia and “marriage” with @BJP4India. I was not there in the House when he spoke. Here’s my response both lighthearted and factual on why I was forced to “divorce” the Congress @PMOIndia pic.twitter.com/qPK95FUxip
— H D Devegowda (@H_D_Devegowda) March 18, 2026
2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಆಫರ್ ಮಾಡಿದ್ದು ಖರ್ಗೆಯವರಿಗೆ ನೆನಪಿರಬಹುದು. ನಾನು ಇದಕ್ಕೆ ಒಪ್ಪಿರಲಿಲ್ಲ. ಖರ್ಗೆಯವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ನಾನು ಎಲ್ಲರ ಸಮ್ಮುಖದಲ್ಲೇ ಹೇಳಿದ್ದೆ.
ಸಿದ್ದರಾಮಯ್ಯನವರು ಕೂಡ ಅಲ್ಲಿಯೇ ಇದ್ದರು. ಆದರೆ ಆಜಾದ್ ಅವರು ಕುಮಾರಸ್ವಾಮಿಯವರ ನಾಯಕತ್ವಕ್ಕೇ ಪಟ್ಟು ಹಿಡಿದರು. ಆದರೆ ಇಷ್ಟೆಲ್ಲಾ ಹಾಡು, ಕುಣಿತ ಮತ್ತು ಮದುವೆಯ ನಂತರ 2019 ರಲ್ಲಿ ಅವರು ಏನು ಮಾಡಿದರು? ಅವರು ನಮ್ಮನ್ನು ಕೈಬಿಟ್ಟರು.
ಎಷ್ಟು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದರು ಮತ್ತು ಅವರನ್ನು ಅಲ್ಲಿಗೆ ಕಳುಹಿಸಿದ್ದು ಯಾರು ಎಂಬುದು ಈಗ ಜಗಜ್ಜಾಹೀರಾಗಿದೆ. ಅಂದು ಪಕ್ಷಾಂತರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ ಇಂದು ನನ್ನ ಸ್ನೇಹಿತ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಾನದಲ್ಲಿರುತ್ತಿದ್ದರು. ಹಾಗಾಗಿ ಸತ್ಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ:
ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟು ಬರಲಿಲ್ಲ. ಅವರೇ ದೂರ ಹೋದರು. ಅವರು ನನಗೆ ಅವರಿಗೆ ʻವಿಚ್ಛೇದನʼನೀಡಿ ಹೆಚ್ಚು ಸ್ಥಿರವಾದ ಮೈತ್ರಿಯನ್ನು ಹುಡುಕಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ.

