ಬೆಂಗಳೂರು: ನನಗೂ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಮಾಜಿ ಸಚಿವ, ಕೆಆರ್ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrati Basavaraj ) ಹೇಳಿದ್ದಾರೆ.
ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ (Shivaprakash) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕೊಲೆಯಾದವನು ಮತ್ತು ಕೊಲೆ ಮಾಡಿದ ಆರೋಪಿಗಳು ನನಗೆ ಗೊತ್ತಿಲ್ಲ. ದೂರು ನೀಡಿದವರು ನನಗೆ ಗೊತ್ತಿಲ್ಲ. ಯಾರೇ ಸುಮ್ಮನೆ ದೂರು ನೀಡಿದರೂ ಎಫ್ಎಆರ್ ದಾಖಲಿಸಬಹುದೇ ಎಂದು ಪ್ರಶ್ನಿಸಿದರು.
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ನನಗೆ ಈ ವಿಚಾರ ಗೊತ್ತಾಯಿತು. ನನಗೆ ಸಂಬಂಧ ಇಲ್ಲದ ಪ್ರಕರಣದಲ್ಲಿ ನನ್ನ ಹೆಸರು ಬಂದಿದೆ. ಎಫ್ಐಆರ್ನಿಂದ ನನ್ನ ಹೆಸರು ತೆಗೆಯಲು ನಾನು ಕಾನೂನು ಸಮರ ಮಾಡುತ್ತೇನೆ. ಗೃಹ ಸಚಿವ ಪರಮೇಶ್ವರ್ ಅವರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ತಪ್ಪಿತು ದೊಡ್ಡ ದುರಂತ – ಮತ್ತೆ ಟೇಕಾಫ್ ಆಗಿ ಇಂಡಿಗೋ ಸೇಫ್ ಲ್ಯಾಂಡಿಂಗ್
ಏನಿದು ಪ್ರಕರಣ?
ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ಮಂಗಳವಾರ ರಾತ್ರಿ ಶಿವಪ್ರಕಾಶ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದೆ. ಶಿವಪ್ರಕಾಶ್ ತಾಯಿ ವಿಜಯಕ್ಷ್ಮಿ ಭಾರತಿನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದು ಜಗದೀಶ್ ಎ1 , ಕಿರಣ್ ಎ2 ವಿಮಲ್ ಎ3, ಅನಿಲ್ ಎ4 ಆರೋಪಿಗಳಾಗಿದ್ದಾರೆ.
ತಾಯಿ ನೀಡಿದ ದೂರಿನಲ್ಲಿ ಏನಿದೆ?
ಕಿತ್ತಕನೂರು ಜಾಗದ ವಿಚಾರವಾಗಿ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಮಗನನ್ನು ಕೊಲೆ ಮಾಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಹಲವು ಬಾರಿ ಮಗನಿಗೆ ಬೆದರಿಕೆ ಹಾಕಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್, ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಮಗ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ.