ಬೆಂಗಳೂರು: ವಿದೇಶದಿಂದ ಕಪ್ಪುಹಣ ವಾಪಸ್ ತರುವ ಬಗ್ಗೆ ಖುದ್ದು ಪ್ರಧಾನಿ ಮೋದಿಯವರು ಭರವಸೆ ನೀಡಿದ್ದರು, ಮೋದಿಯವರ ಮಾತನ್ನು ನಂಬಿ ಮೂರ್ಖನಾದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಕಪ್ಪುಹಣ ಜರ್ಮನಿಯಲ್ಲಿ ಇರುವ ಬಗ್ಗೆ ಜರ್ಮನಿ ದೇಶ ಮಾಹಿತಿ ಕೊಡಲು ಸಜ್ಜಾಗಿತ್ತು. ಆದರೆ ಅಂದಿನ ಆಡಳಿತಾರೂಢ ಕಾಂಗ್ರೆಸ್ ಆಸಕ್ತಿ ತೋರಲಿಲ್ಲ. ಜರ್ಮನಿ ದೇಶ ಕಪ್ಪುಹಣ ಇಟ್ಟಿರುವವರ ಮಾಹಿತಿ ಕೊಡಲು ತಯಾರಿದೆ ಆದರೆ ನಮ್ಮ ಸರ್ಕಾರ ಮಾಹಿತಿ ಪಡೆಯಲು ತಯಾರಿಲ್ಲ ಎಂದು ಸುಪ್ರೀಂ ಕೋರ್ಟ್ ಅಲ್ಲಿ 2011 ರಲ್ಲಿ ದೂರು ನೀಡಿದ್ದೆವು ಎಂದರು.
ಇದಾದ ಬಳಿಕ ಮೋದಿಯವರು ನನ್ನ ನಡೆಯನ್ನು ಬೆಂಬಲಿಸಿ ವಿದೇಶದಿಂದ ಕಪ್ಪು ಹಣವನ್ನು ವಾಪಸ್ ತರೋಣ ಎಂದು ಸಾಕಷ್ಟು ಬಾರಿ ನನ್ನ ಜೊತೆ ಮಾತನಾಡಿದ್ದರು. ಇದೇ ವಿಚಾರದ ಕುರಿತು ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಸಿದ್ದಪಡಿಸಲು ಹೇಳಿದರು. ಪ್ರಣಾಳಿಕೆಯ ಬಹುತೇಕ ಅಂಶಗಳನ್ನು ಬರೆದುಕೊಟ್ಟೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸಿದ್ದೆ. ವಿದೇಶದಿಂದ ಕಪ್ಪು ಹಣ ತರುತ್ತಾರೆ, ಹದಿನೈದು ಲಕ್ಷ ರೂ ಪ್ರತಿ ಭಾರತೀಯನ ಆಕೌಂಟಿಗೆ ಜಮೆಯಾಗುತ್ತದೆ ಎಂದು ಕರೆ ಕೊಟ್ಟಿದ್ದರು. ಆದರೆ ಈಗ ಅದೆಲ್ಲವನ್ನು ಮರೆತಿದ್ದಾರೆ ಎಂದರು.
ಪ್ರಧಾನಿಯಾದ ಬಳಿಕ ಅವರಿಗೊಂದು ಪತ್ರ ಬರೆದು ಜನರ ಭರವಸೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೆ. ಭರವಸೆಗಳು ಈಡೇರುತ್ತದೆ ಅಂತ ಅಂದುಕೊಂಡಿದ್ದೆ. ಮೋದಿಯವರನ್ನ ನಂಬಿದ್ದೆ ಆದರೆ ಮೂರ್ಖನಾದೆ. ಕೊಟ್ಟ ಮಾತು ಮೋದಿ ಉಳಿಸಿಕೊಂಡಿಲ್ಲ. ಈಗ ಅದೆಲ್ಲವನ್ನು ಮರೆತಿದ್ದಾರೆ. ಎರಡೂ ಪಕ್ಷಗಳಿಗೂ ಹಣ ತರುವಲ್ಲಿ ಆಸಕ್ತಿ ಇಲ್ಲ ಎಂದು ಮೋದಿ ವಿರುದ್ಧದ ಜಾರ್ಜ್ ಶೀಟ್ ಬಿಡುಗಡೆ ಮಾಡಿದರು.
ಅಮಿತ್ ಶಾ ಕಪ್ಪು ಹಣ ವಾಪಸ್ ತರುವ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಅದೆಲ್ಲವೂ ಹಾಸ್ಯ ಮಾಡಿರೋದು ಅಂತಾ ಈಗ ಅನಿಸಿದೆ. ಭಾರತೀಯರ ಕನಸನ್ನು ನುಚ್ಚು ನೂರು ಮಾಡಿದ್ದಾರೆ ಎಂದು ಹರಿಹಾಯ್ದರು.