– ಮಗಳು ಕೂಡ ಸೇನೆ ಸೇರಲು ಬಯಸಿದ್ದಾಳೆ
– ಪತ್ನಿಯ ಫೋಟೋ ವೈರಲ್
ನವದೆಹಲಿ: ಅವಕಾಶ ಕೊಟ್ಟರೆ ನಾನು ಸೇನೆ ಸೇರುತ್ತೇನೆ, ಪತಿಯಂತೆ ದೇಶ ಸೇವೆ ಮಾಡುತ್ತೇನೆ ಎಂದು ಭಾನುವಾರ ಹಂದ್ವಾರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಕರ್ನಲ್ ಅಶುತೋಷ್ ಶರ್ಮಾ ಅವರ ಪತ್ನಿ ಪಲ್ಲವಿ ಅವರು ಹೇಳಿಕೊಂಡಿದ್ದಾರೆ.
ನನಗೆ ಸೇನೆ ಸೇರಲು ಇಷ್ಟ ಆದರೆ ವಯಸ್ಸಿನ ಮಿತಿ ಮೀರಿದ ಹಿನ್ನೆಲೆ ಸೇನೆ ಸೇರಲು ಆಗುವುದಿಲ್ಲ. ಒಂದು ವೇಳೆ ಸಚಿವಾಲಯ ಒಪ್ಪಿ ಅವಕಾಶ ಕೊಟ್ಟರೆ ಖಂಡಿತ ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧ, ಸೇನೆಯ ಸಮವಸ್ತ್ರ ಧರಿಸಲು ಸಿದ್ಧ ಎಂದು ಪಲ್ಲವಿ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಪಂಚಭೂತಗಳಲ್ಲಿ ಕರ್ನಲ್ ಅಶುತೋಷ್, ಮೇಜರ್ ಅನುಜ್ ಲೀನ- ಅನುಜ್ ಚಿತೆಗೆ ನಮಸ್ಕರಿಸಿದ ಪತ್ನಿ
ಅಲ್ಲದೇ ತಮ್ಮ 11 ವರ್ಷದ ಮಗಳು ಕೂಡ ಸೇನೆ ಸೇರಲು ಬಯಸಿದ್ದಾಳೆ. ಆದರೆ ಎಲ್ಲದಕ್ಕಿಂತ ಮೊದಲು ಆಕೆ ಒಳ್ಳೆಯ ಭಾರತೀಯ ಪ್ರಜೆ ಆಗುವುದು ಮುಖ್ಯ. ಕಳೆದ ಎರಡು ದಿನಗಳಿಂದ ಅವಳು ಏನು ನೋಡುತ್ತಿದ್ದಾಳೋ ಅದರಿಂದ ಆಕೆ ಭಾರತೀಯ ಸೇನೆ ಸೇರಲು ಇಚ್ಛಿಸಿದ್ದಾಳೆ. ಸೇನೆ ಸೇರುವ ಮೊದಲು ಆಕೆ ಒಳ್ಳೆಯ ಹಾಗೂ ಜವಾಬ್ದಾರಿ ಇರುವ ಪ್ರಜೆ ಆಗುವುದು ಮುಖ್ಯ ಎಂದು ಪಲ್ಲವಿ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುತಾತ್ಮ ಅನುಜ್ ಸೂದ್ ಅವರಿಗೆ ಪಂಚಕುಲದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಮೊದಲು ಅವರ ಪತ್ನಿ ಆಕೃತಿ ಮೌನಕ್ಕೆ ಜಾರಿದ್ದರು. ಅವರು ಶವಪೆಟ್ಟಿಗೆ ಪಕ್ಕದಲ್ಲೇ ನಿಂತು ಪತಿ ಅನುಜ್ ಅವರನ್ನು ಬಹಳ ಹೊತ್ತು ನೋಡಿದರು. ಅನುಜ್ ಅವರ ತಾಯಿ ಕೂಡ ಶವಪೆಟ್ಟಿಗೆಯ ಬಳಿ ಬಹಳ ಹೊತ್ತು ಕುಳಿತು ಕಣ್ಣೀರಿಟ್ಟರು. ದೇಶಕ್ಕಾಗಿ ಪ್ರಾಣ ಬಿಟ್ಟ ಹುತಾತ್ಮ ಪತಿಯನ್ನು ಆಕೃತಿಯವರು ಮೌನವಾಗಿ ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹುತಾತ್ಮರಿಗೆ ಕಂಬನಿ ಮಿಡಿದಿದ್ದಾರೆ.
ಭಾನುವಾರ ಹಂದ್ವಾರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಲ್ ಅಶುತೋಷ್ ಶರ್ಮಾ ಹಾಗೂ ಮೇಜರ್ ಅನುಜ್ ಸೂದ್ ಸೇರಿದಂತೆ ಭಾರತೀಯ ಸೇನಾ ಪಡೆಯ ಐವರು ಸಿಬ್ಬಂದಿ ಹುತಾತ್ಮರಾಗಿದ್ದರು. ಮಂಗಳವಾರ ಸಕಲ ಸೇನಾ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.