ಬೆಂಗಳೂರು: ಬಿಜೆಪಿಯಲ್ಲಿ ಮತ್ತೆ ನಾಯಕರ ನಡುವಿನ ಮುನಿಸು ಆರಂಭವಾಗಿದ್ದು, ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಐಟಿ ದಾಳಿ ವಿಚಾರ ಬಗ್ಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜಾಣ ನಡೆಗೆ ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗಿದೆ.
ಸಚಿವ ಡಿಕೆಶಿ ನಿವಾಸದ ಮೇಲಿನ ಐಟಿ ದಾಳಿಯನ್ನು ಲಾಭವಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಬಹುದಾಗಿತ್ತು. ಆದರೆ ಬಿಎಸ್ ಯಡಿಯೂರಪ್ಪನವರು ಈ ವಿಚಾರದಲ್ಲಿ ಅಷ್ಟೇನು ಆಸಕ್ತಿ ತೋರಿಸದಕ್ಕೆ ಬಿಜೆಪಿಯ ಅತೃಪ್ತ ನಾಯಕರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಲು ಮುಂದಾಗಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಅತೃಪ್ತರು ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸಲು ಮುಂದಾಗಿದ್ದರು. ಆದರೆ ಅಮಿತ್ ಶಾ ಭೇಟಿಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಪತ್ರದ ಮೂಲಕ ದೂರು ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಮೇಲೆ ಕೈ ನಾಯಕರು ಟೀಕೆ ಮಾಡುತ್ತಿದ್ದಾಗ ಬಿಎಸ್ವೈ ಮೌನವಾಗಿದ್ದರು. ಐಟಿ ದಾಳಿಗೆ ಉತ್ತರ ಕೊಡುವ ಸಾಮಥ್ರ್ಯ ಡಿ.ಕೆ.ಶಿವಕುಮಾರ್ ಅವರಿಗೆ ಇದೆ ಎಂದು ಬಿಎಸ್ವೈ ಉತ್ತರಿಸಿದ್ದರು. ಅಧ್ಯಕ್ಷರು ಮೃದು ಧೋರಣೆ ತೋರಿದ ಪರಿಣಾಮ ಇತರ ನಾಯಕರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ. ಐಟಿ ದಾಳಿ ನಡೆದಿದ್ದೇ ದುರುದ್ದೇಶಪೂರ್ವಕ ಎನ್ನುವ ಭಾವನೆ ರಾಜ್ಯದ ಜನತೆಗೆ ಹೋಗಿದೆ. ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಳ್ಳಲು ರಾಜ್ಯ ನಾಯಕರೇಕೆ ಮುಂದಾಗಿಲ್ಲ? ಎಲ್ಲದಕ್ಕೂ ಮಾತನಾಡುವ ಶೋಭಾ ಕರಂದ್ಲಾಜೆ ಮೌನವಾಗಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅತೃಪ್ತ ನಾಯಕರು ಶನಿವಾರ ರಾತ್ರಿ ಅಮಿತ್ ಶಾ ಅವರಿಗೆ ದೂರಿನ ಪತ್ರವನ್ನು ತಲುಪಿಸಲು ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಗೆ ಸ್ಫೋಟಕ ಟ್ವಿಸ್ಟ್