ಬೆಂಗಳೂರು: ನಿಖಿಲ್ ಅವರು ಪ್ರಚಾರಕ್ಕೆ ಕರೆದಿದ್ದರೆ ಯೋಚನೆ ಮಾಡಬಹುದಾಗಿತ್ತು, ಆದ್ರೆ ನಾನು ಮನೆ ಮಗನಾಗಿ ಸುಮಲತಾ ಅವರ ಪರ ಪ್ರಚಾರ ಮಾಡುತ್ತೇನೆ. ಆದರಿಂದ ಒಂದೇ ಕ್ಷೇತ್ರದಲ್ಲಿ ಇಬ್ಬರ ಪರ ಪ್ರಚಾರ ಮಾಡಕ್ಕಾಗಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ರಾಜಧಾನಿಯ ಖಾಸಗಿ ಹೋಟೆಲ್ನಲ್ಲಿ ಸುಮಲತಾ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವತ್ತು ಪಕ್ಷ ನೋಡಿ ಬೆಂಬಲ ಕೊಡಲ್ಲ. ಮೊದಲು ಅಪ್ಪಾಜಿ ಇದ್ದಾಗ ಅವರ ಸ್ನೇಹಿತರು ಚುನಾವಣೆಗೆ ನಿಂತರೆ, ಅವರ ಪರವಾಗಿ ಪ್ರಚಾರ ಮಾಡಿ ಬಾ ಅಂತಿದ್ದರು. ನನಗೆ ಪರಿಚಯವಿಲ್ಲದ್ದರು ನಾನು ಅವರ ಮಾತಿಗೆ ಬೆಲೆ ಕೊಟ್ಟು ಪ್ರಚಾರ ಮಾಡುತ್ತಿದ್ದೆ. ನಾನು ಕಲಾವಿದನಾಗಿ ಪ್ರಚಾರ ಮಾಡಲ್ಲ, ಮನೆ ಮಗನಾಗಿ ಸುಮಲತಾ ಅವರ ಪರ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
ಆದ್ರೆ ಈಗಾಗಲೇ ಮಂಡ್ಯದಲ್ಲಿ ಸುಮಲತಾ ಅವರ ಪರ ನಾನಿದ್ದೇನೆ. ಒಂದೇ ಕ್ಷೇತ್ರದಲ್ಲಿ ಇಬ್ಬರ ಪರ ಪ್ರಚಾರ ಮಾಡೋಕೆ ಆಗುತ್ತಾ? ಇಲ್ಲ. ಆದರೇ ಪ್ರಜ್ವಲ್ ರೇವಣ್ಣ ನನ್ನ ಒಳ್ಳೆಯ ಗೆಳೆಯ. ಅವರು ಕರೆದರೆ ಹಾಸನಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಪರೋಕ್ಷವಾಗಿ ನಿಖಿಲ್ ಪರ ಪ್ರಚಾರ ಮಾಡಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ.