ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸಂಸದ ಎಲ್.ಆರ್ ಶಿವರಾಮೇಗೌಡ ಮತ್ತೆ ಮಾತು ಮುಂದುವರಿಸಿದ್ದಾರೆ. ಸುಮಲತಾಳ ಗಂಡನನ್ನು ನಂಬಿ ನಾನು ಕೆಟ್ಟೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಸಂಸದರು, ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕೆ ಮನೆ ಕೊಡಿಸ್ಲಿಲ್ಲ. ಆಗ ಗೌರಮ್ಮನ ಹಾಗೆ ಮನೆಯಲ್ಲಿದ್ದು, ಅಂಬರೀಶ್ ಸತ್ತಾಗ ಕುಮಾರಸ್ವಾಮಿಗೆ ಬುದ್ಧಿ ಇಲ್ಲದೆ ಮಂಡ್ಯಗೆ ತಂದ ಸಮಯದಲ್ಲಿ ಜನ ನೋಡಿದ್ದಾರೆ ಅಲ್ವಾ. ಓಹೋ ಇವರೆಲ್ಲಾ ವೋಟ್ ಹಾಕ್ತಾರೆ. ಇದು ಫಿಲ್ಮೀ ಸ್ಟೈಲ್ನಲ್ಲಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಮಲತಾ ಟೂರಿಂಗ್ ಟಾಕೀಸ್ 18ನೇ ದಿನಾಂಕದವರೆಗೂ ಶೂಟಿಂಗ್ ನಡೆಯುತ್ತದೆ. ಆ ಮೇಲೆ ಸುಮಕ್ಕನೂ ಇಲ್ಲ, ಪಮಕ್ಕಾನೂ ಇಲ್ಲ. ಆಮೇಲೆ ಅವರನ್ನು ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತದೆ. ಹುಡುಕಲು ಹೋಗ್ತಿರಾ ಹೇಳಿ. ಈ ಟೂರಿಂಗ್ ಟಾಕೀಸ್ ನವರ 18ನೇ ದಿನಾಂಕವನ್ನು ಪ್ಯಾಕ್ ಮಾಡಿಸಿ ಕಳುಹಿಸಬೇಕು. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗಲ್ಲ. ಹಾಗೆಯೇ ಇದು ಎಂದು ಕಿಡಿಕಾಡಿದ್ದಾರೆ.
ಸುಮಲತಾರಂತೆ ದರ್ಶನ್ ಕೂಡ ನಾಯ್ಡು. ಲೇ ಗೌಡ್ರು ಕತೆ ಏನಾಗಬೇಕ್ರೊ. ನಾಯ್ಡುಗಳ ಮಯವನ್ನು ಮಂಡ್ಯದಲ್ಲಿ ಮಾಡಲು ಬಿಡಬಾರದು ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ ಅವಳ ಗಂಡನ ನಂಬಿಕೊಂಡೇ ನಾನು 20 ವರ್ಷ ಹಾಳು ಮಾಡಿಕೊಂಡೆ. ಈ ಪುಣ್ಯಾತ್ಮನನ್ನು ಪಕ್ಷಕ್ಕೆ ಕರೆತಂದ ಕಾರಣ 20 ವರ್ಷ ಅಧಿಕಾರ ವಂಚಿತನಾಗಿ ಕುಳಿತಿದ್ದೇನೆ. ಅಮರಾವತಿ ಚಂದ್ರ ಅವರ ಮನೆಯಲ್ಲಿ ಅಡುಗೆ ಮಾಡಿ ಹಾಕಿ ಹಾಕಿ ಸೋತೋಗಿದ್ದಾರೆ ಎಂದು ಟೀಕಿಸಿದ್ದಾರೆ. ಈ ಮೂಲಕ ಶಿವರಾಮೇಗೌಡ ಪದೇ ಪದೇ ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಎಂದು ಹೇಳುತ್ತಿರುವುದರಿಂದ ಸುಮಲತಾ ಅಂಬರೀಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.