ಹಾಸನ: ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಅಂತಾ ಎಲ್ಲರೂ ಒಂದಾಗಿದ್ದಾರೆ. ನನ್ನ ಆಡಳಿತದ ಅವಧಿಯಲ್ಲಿ ಎಲ್ಲಾ ಜಾತಿಯ ಬಡ ಜನರಿಗೆ ಸಹಾಯ ಮಾಡಿರುವೆ. ಹೀಗಾಗಿ ನನಗೆ ಜನರ ಆಶೀರ್ವಾದವಿದೆ, ಮತ್ತೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೊಳೇನರಸೀಪುರದಲ್ಲಿ ಮಾತನಾಡಿದ ಮಾಜಿ ಸಿಎಂ, ರಾಜಕೀಯ ಇಂದು ಹಣ ಮತ್ತು ಜಾತಿಯ ಮೇಲೆ ನಡೆಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಉತ್ತಮ ಕೆಲಸಗಳನ್ನು ಮಾಡುವವರನ್ನು ಗೆಲ್ಲಿಸಬೇಕು. ನನ್ನ ಆಡಳಿತದ ಅವಧಿಯಲ್ಲಿ ಹಾಲು, ಅಕ್ಕಿ, ಪಶು ಭಾಗ್ಯ, ಶೂ ಭಾಗ್ಯ ನೀಡಿರುವೆ. ಇವು ಕೇವಲ ಒಂದು ಜಾತಿಗೆ ಸಿಮೀತವಾಗಿಲ್ಲ ಎಂದು ಹೇಳಿದರು.
ನಾನು ರಾಜಕೀಯದಲ್ಲಿ ಹೆದರುವ ಪ್ರಮಯವೇ ಇಲ್ಲ. ಮುಂದೇಯೂ ಹೋರಾಡುತ್ತೇನೆ. ರಾಜಕೀಯ ಎನ್ನುವುದು ನಿಂತ ನೀರಲ್ಲ, ಅದು ಹರಿಯುವ ನೀರು. ಚಕ್ರ ಉರುಳಿದಂತೆ ಬದಲಾವಣೆ ಆಗಲೇಬೇಕು. ಮೇಲಿನವರು ಕೆಳಗೆ, ಕೆಳಗಿನವರು ಮತ್ತೆ ಮೇಲೆ ಬರಲೇ ಬೇಕು ಎಂದು ಪರೋಕ್ಷವಾಗಿ ರಾಜಕೀಯ ವಿರೋಧಿಗಳಿಗೆ ಕುಟುಕಿದ್ದಾರೆ.
ಸಮಾಜ ಸರಿಯಾಗಬೇಕು ಎಂದರೆ ಜಾತಿಭಾವನೆ ಇರಬಾರದು. ಎಲ್ಲರೂ ಬಸವಣ್ಣ ಮತ್ತು ಅಂಬೇಡ್ಕರ್ ಸಲಹೆಯಂತೆ ನಡೆದುಕೊಳ್ಳಬೇಕಿದೆ. ರಾಜ್ಯದ ಜನತೆ ಆಶೀರ್ವಾದದಿಂದ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ. ಆಗ ಇನ್ನುಳಿದ ಕೆಲಸಗಳನ್ನು ಮಾಡುತ್ತೇನೆ. ಮಹಿಳೆಯರಿಗೆ ಮೀಸಲಾತಿ ನೀಡಿರುವೆ, ದೀನದಲಿತರ ಬೆಳವಣಿಗೆಗೆ ಶ್ರಮಿಸಿದ್ದೇನೆ. ಈ ಕುರಿತು ನಾನು ಹೇಳಿಕೊಂಡಿಲ್ಲ. ಆದರೆ ಕೆಲವರು ಕೆಲಸ ಮಾಡದೆ ಹೇಳಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv